ರಾಷ್ಟ್ರೀಯ

ಮುಂಬರುವ ಲೋಕಸಭೆ ಚುನಾವಣೆ ಗೆಲುವಿಗೆ ಬಿಜೆಪಿ ಬತ್ತಳಿಕೆಯಲ್ಲಿದೆ ಹೊಸ ‘ಬಿಲ್‌’ ವಿದ್ಯೆ

Pinterest LinkedIn Tumblr


ಹೊಸದಿಲ್ಲಿ: ದಲಿತ ಮತ್ತು ಒಬಿಸಿ ವಿಧೇಯಕಗಳು ಹಾಗೂ ಅಕ್ರಮ ವಲಸೆ ಸಮಸ್ಯೆಯನ್ನು ಅಸ್ತ್ರವಾಗಿಸಿಕೊಂಡು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಜಂಘಾಬಲ ಅಡಗಿಸಲು ಬಿಜೆಪಿ ಭರ್ಜರಿ ರಣತಂತ್ರ ರೂಪಿಸಿದೆ.

ದೇಶದ ಬಹುದೊಡ್ಡ ಮತ ಬ್ಯಾಂಕ್‌ ಎನಿಸಿರುವ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯವನ್ನು ಸಂತೃಪ್ತಿಗೊಳಿಸುವ ವಿಧೇಯಕಗಳನ್ನು ಮಂಡಿಸಿ, ಅನುಮೋದನೆ ಗಿಟ್ಟಿಸುವ ಗೆಲುವಿನ ಹೊಸ ವರಸೆಯನ್ನು ಬಿಜೆಪಿ ಪ್ರಯೋಗಿಸಿದೆ. ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನೇ ಪ್ರಶ್ನಿಸುವ ವಿಧೇಯಕವೊಂದನ್ನು ಸರಕಾರ ಲೋಕಸಭೆಯಲ್ಲಿ ಮಂಡಿಸಿದೆ. ಇದರಿಂದ ದಲಿತ ಸಮುದಾಯದಲ್ಲಿ ಬಿಜೆಪಿ ಬಗ್ಗೆ ಈಗಾಗಲೇ ಸುರಕ್ಷತೆಯ ನಂಬಿಕೆ ಸೃಷ್ಟಿಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಒಬಿಸಿ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ನೀಡುವ ವಿಧೇಯಕ ಕಳೆದ ವಾರ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಇದು ಕೂಡ ದೊಡ್ಡ ಮತಬ್ಯಾಂಕ್‌ವೊಂದನ್ನು ಗೆಲ್ಲುವ ಸಮರ್ಥ ತಾಲೀಮು ಎಂದು ವ್ಯಾಖ್ಯಾನಿಸಲಾಗಿದೆ.

ಜತೆಗೆ ಅಸ್ಸಾಂನಲ್ಲಿ ಈಗ ಎದ್ದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿವಾದವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಸಾರಿರುವ ಎನ್‌ಆರ್‌ಸಿ ಸಮರ ನಿರೀಕ್ಷೆಯಂತೆ ಸಾಗಿದರೆ ದೇಶದ ಪೂರ್ವದ ರಾಜ್ಯಗಳು ಹಾಗೂ ಹಿಂದಿ ಹೃದಯ ಭಾಗದಲ್ಲಿ ಪಕ್ಷಕ್ಕೆ ಭಾರಿ ಲಾಭ ದಕ್ಕಲಿದೆ ಎನ್ನುವುದು ಮುಖಂಡರ ಲೆಕ್ಕಾಚಾರ.

ಬಾಂಗ್ಲಾ ವಲಸಿಗರ ಸಮಸ್ಯೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮೇಲಿಂದ ಮೇಲೆ ಪ್ರಸ್ತಾಪಿಸುತ್ತಿರುವುದರ ಹಿಂದೆ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಲೆಕ್ಕಾಚಾರ ಅಡಗಿದೆ.
“ರಾಜ್ಯಸಭೆಯಲ್ಲಿ ಒಬಿಸಿ ವಿಧೇಯಕಕ್ಕೆ ತನ್ನ ಬೆಂಬಲ ಇದೆ ಎಂದು ಕಾಂಗ್ರೆಸ್‌ ಘೋಷಿಸಬಲ್ಲದೇ? ಹಾಗೆಯೇ ಅಕ್ರಮ ವಲಸಿಗರ ರಕ್ಷಣೆಗೆ ತಾವು ನಿಲ್ಲುವುದಿಲ್ಲ ಎನ್ನುವುದಾದರೆ ಪ್ರತಿಪಕ್ಷಗಳೆಲ್ಲವೂ ಆ ನಿಲುವನ್ನು ದೇಶದ ಮುಂದೆ ಸ್ಪಷ್ಟಪಡಿಸಬೇಕು.” –ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

Comments are closed.