ಲಖನೌ: ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ‘ನಿಖಾ ಹಲಾಲ’ (ಎರಡನೇ ಪತಿಗೆ ತಲಾಕ್ ನೀಡಿ ಮತ್ತೆ ಮೊದಲ ಪತಿ ಜೊತೆ ಮರುಮದುವೆ) ಪದ್ಧತಿ ನಿಷೇಧಿಸಬೇಕೆಂಬ ಮನವಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಂದಾಗಿದೆ. ಇದರ ನಡುವೆಯೇ, ಈ ಪದ್ಧತಿಯಿಂದ ಸಂಕಷ್ಟಕ್ಕೆ ಸಿಲುಕಿದ ಉತ್ತರ ಪ್ರದೇಶದ ಮಹಿಳೆಯೊಬ್ಬರ ನೋವಿನ ಕತೆ ಬಯಲಾಗಿದೆ.
ರಾಜ್ಯದ ಬರೇಲಿಯಲ್ಲಿರುವ ಶಬಾನಾ ಎಂಬ ಮಹಿಳೆಗೆ ಪತಿ ತಲಾಕ್ ನೀಡಿರುವುದಲ್ಲದೆ, ಆಕೆಯನ್ನೇ ಮತ್ತೆ ಮದುವೆಯಾಗಲು (ನಿಖಾ ಹಲಾಲ) ಮಾವನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿ, ವಿಚ್ಛೇದನ ಕೊಡಿಸಲಾಗಿದೆ. ಅಷ್ಟೇ ಅಲ್ಲ, ಪತ್ನಿಯನ್ನು ಮರುಮದುವೆಯಾದ ಪತಿ, ಮತ್ತೆ ಆಕೆಗೆ ವಿಚ್ಛೇದನ ನೀಡಿ, ಮಗದೊಮ್ಮೆ ಮದುವೆಯಾಗಲು ಭಾವಮೈದುನನ ಜತೆ ಬಲವಂತದ ವಿವಾಹ ಮಾಡಲು ಮುಂದಾಗಿದ್ದಾನೆ. ಇದಕ್ಕೆ ಪ್ರತಿರೋಧ ತೋರಿದ ಮಹಿಳೆಗೆ ಪ್ರಾಣ ಬೆದರಿಕೆ ಒಡ್ಡಲಾಗಿದೆ.
ಇದರಿಂದ ಬೇಸತ್ತ ಮಹಿಳೆಯು, ಸ್ನೇಹಿತೆಯ ನೆರವಿನೊಂದಿಗೆ ಮಾಧ್ಯಮಗಳ ಮುಂದೆ ಬರುವುದರೊಂದಿಗೆ ಪ್ರಕರಣ ಬಯಲಿಗೆ ಬಂದಿದೆ. ಪ್ರಸ್ತುತ ಶಬೀನಾ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮಗೆ ಪ್ರಾಣ ಬೆದರಿಕೆ ಹಾಕಿದ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಷರಿಯಾ ಕಾನೂನು ಪಾಲಿಸದಿದ್ದರೆ, ಸಮುದಾಹದಿಂದ ಬಹಿಷ್ಕಾರ ಹಾಕುವುದಾಗಿ ಮತ್ತು ಪ್ರಾಣ ತೆಗೆಯುವುದಾಗಿ ಮುಸ್ಲಿಂ ಸಮುದಾಯದ ಮುಖಂಡರು ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Comments are closed.