ವಿಜಯವಾಡ: ಮೃತಪಟ್ಟ ಮಹಿಳೆಯೊಬ್ಬರು ದೇವರ ದಯದಿಂದ ಮರು ಜನ್ಮಪಡೆಯುತ್ತಾಳೆ ಎಂದು ಭಾವಿಸಿ ಆಕೆಯ ಸಂಬಂಧಿಕರು ಮೂರು ದಿನಗಳ ಕಾಲ ಶವ ಇಟ್ಟು ಕಾಯ್ದ ವಿಲಕ್ಷಣ ಸಂಗತಿ ವರದಿಯಾಗಿದೆ. ಅರುಣಾ ಜ್ಯೋತಿ (41) ಎಂಬುವವರು ಸಂಶಯಾತ್ಮಕ ರೀತಿಯಲ್ಲಿ ಮೃತಪಟ್ಟಿದ್ದರು.
ಆದರೆ ಆಕೆಯ ತಾಯಿ ಮತ್ತು ಸೋದರ ಮಾತ್ರ ಸಾವಿನ ವಾಸ್ತವ ಒಪ್ಪದೇ ಮರುಜನ್ಮ ಪಡೆಯುವ ಭ್ರಮೆಯಲ್ಲಿ ಶವವನ್ನು ತಮ್ಮ ಅಪಾರ್ಟ್ಮೆಂಟಿನ ಫ್ಲಾಟ್ನಲ್ಲಿ ಇಟ್ಟು ಕಾಯ್ದಿದ್ದರು. ಯಾರ ಮಾತಿಗೂ ಕಿವಿಗೊಡದೇ ಭಗವಂತನ ಆಶೀರ್ವಾದಕ್ಕಾಗಿ ಎದುರು ನೋಡುತ್ತ ಕುಳಿತಿದ್ದರು.
ಇದರಿಂದ ಬೇಸತ್ತ ಅಪಾರ್ಟ್ಮೆಂಟಿನ ನಿವಾಸಿಗರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗಲೂ ಕಿಂಚಿತ್ತೂ ಗಾಬರಿಗೊಳ್ಳದ ತಾಯಿ ಮತ್ತು ಮಗ, ಶವವನ್ನು ಮನೆಯಲ್ಲಿಟ್ಟುಕೊಂಡೇ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದ್ದರು. ಪೊಲೀಸರು ಗದರಿಸಿ ಕೇಳಿದಾಗ, ‘‘ದೇವರು ಆಕೆಯ ಪ್ರಾಣ ತೆಗೆದುಕೊಂಡು ಹೋಗಿದ್ದಾನೆ. ಈಗ ಆತನೇ ಆಕೆಯನ್ನು ಬದುಕಿಸಬೇಕಿದೆ,’’ ಎನ್ನುವ ಉತ್ತರ ನೀಡಿದ್ದರು.
ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಶವಸಂಸ್ಕಾರ ನಡೆಸಲು ಬಂಧುಗಳಿಗೆ ಅನುವು ಮಾಡಿಕೊಟ್ಟರು. ‘‘ತಾಯಿ, ಮಗ ಇಬ್ಬರ ಮನಸ್ಥಿತಿಯೂ ಸರಿಯಿಲ್ಲ,’’ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.