ಜೈಪುರ: ಟಿಂಡರ್ ಡೇಟಿಂಗ್ ಅಪ್ಲಿಕೇಶನ್ ಬಳಸಿ ಸತತ ಆರು ವರ್ಷಗಳಿಂದ ಜನರಿಗೆ ಪಂಗನಾಮ ಹಾಕಿ ಹಣ ಲಪಟಾಯಿಸುವುದೂ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದ ಯುವತಿ ಪ್ರಿಯಾ ಸೇಥಿ (27) ಮತ್ತು ಆಕೆಯ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಲಿ ಮೂಲದ ಪ್ರಿಯಾ ವಿದ್ಯಾಭ್ಯಾಸಕ್ಕೆಂದು ಜೈಪುರಕ್ಕೆ ಬಂದಿದ್ದಳು. ಈಕೆಯು ಪ್ರಿಯಕರ ದೀಕ್ಷಾಂತ್ ಕಮ್ರಾ ಹಾಗೂ ಆತನ ಸ್ನೇಹಿತ ಲಕ್ಷ್ಯ ವಾಲಿಯಾ ಜತೆ ಸೇರಿ ಹಣ ಸುಲಿಗೆ, ಎಟಿಎಮ್ ಕಳ್ಳತನ, ವ್ಯಕ್ತಿಯೊಬ್ಬನ ಕೊಲೆ ನಡೆಸಿದ್ದಾಳೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ಪ್ರಿಯಾ ಟಿಂಡರ್ ಆ್ಯಪ್ ಮೂಲಕ ಜೈಪುರದ ಉದ್ಯಮಿ ದುಶ್ಯಂತ್ ಶರ್ಮನನ್ನು ಸ್ನೇಹಿತನನ್ನಾಗಿ ಮಾಡಿಕೊಂಡಿದ್ದಳು. ಆತನ ಬಳಿ ಹಣ ಕೀಳುವುದೇ ಆಕೆಯ ಉದ್ದೇಶವಾಗಿತ್ತು. ಹಾಗಾಗಿ ಆತನನ್ನು ಮೇ 2ರಂದು ಮನೆಗೆ ಕರೆಸಿಕೊಂಡಿದ್ದಳು. ಆದರೆ ಮನೆಗೆ ಬಂದಾಗ ಆತನ ಬಳಿ ಸಾಕಷ್ಟು ಹಣ ಇಲ್ಲದಿರುವುದು ತಿಳಿದು ಬಂದಿತು. ಈತನನ್ನು ಹೀಗೆ ಬಿಟ್ಟರೆ ಎಲ್ಲಾ ಸತ್ಯಗಳನ್ನು ಹೊರಗಡೆ ಬಹಿರಂಗ ಪಡಿಸುತ್ತಾನೆ ಎಂಬ ಉದ್ದೇಶದಿಂದ ಈ ವೇಳೆ ಅಲ್ಲೇ ಇದ್ದ ಪ್ರಿಯಕರ ದೀಕ್ಷಾಂತ್ ಕಮ್ರಾ, ಲಕ್ಷ್ಯ ವಾಲಿಯಾ ಜತೆ ಸೇರಿ ಉದ್ಯಮಿಯನ್ನು ಕೊಲೆ ಮಾಡಿದ್ದಳು. ಬಳಿಕ ಆತನ ತಂದೆಗೆ ಕರೆ ಮಾಡಿ ₹10 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಮೃತದೇಹವನ್ನು ಸೂಟ್ಕೇಸ್ಗೆ ಹಾಕಿ ಅಮೇರ್ ಎಂಬಲ್ಲಿ ಬಿಸಾಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
Comments are closed.