ರಾಷ್ಟ್ರೀಯ

ಹೊಸ ರಾಜಕೀಯ ಪಕ್ಷ ಹುಟ್ಟುಹಾಕಿದ 50 ಐಐಟಿ ಪದವೀಧರರು

Pinterest LinkedIn Tumblr


ಹೊಸದಿಲ್ಲಿ: ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) 50 ಮಂದಿ ಹಳೆ ವಿದ್ಯಾರ್ಥಿಗಳು ತಮ್ಮ ಉದ್ಯೋಗಕ್ಕೆ ಗುಡ್ ಬೈ ಹೇಳಿ ರಾಜಕೀಯ ಕ್ಷೇತ್ರಕ್ಕೆ ಅಡಿಯಿಟ್ಟಿದ್ದಾರೆ. ಇವರೆಲ್ಲಾ ಸೇರಿ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.

ತಮ್ಮ ಪಕ್ಷಕ್ಕೆ ‘ಬಹುಜನ ಆಜಾದ್ ಪಕ್ಷ’ ಎಂದು ಹೆಸರಿಟ್ಟಿದ್ದು ಚುನಾವಣಾ ಆಯೋಗದ ಅನುಮೋದನೆಯ ನಿರೀಕ್ಷೆಯಲ್ಲಿದ್ದಾರೆ. ‘ನಮ್ಮದು ಒಟ್ಟು 50 ಮಂದಿ ಸದಸ್ಯರ ತಂಡ. ಎಲ್ಲರೂ ಬೇರೆಬೇರೆ ಐಐಟಿ ಪದವೀಧರರು. ಇವರೆಲ್ಲಾ ತಮ್ಮ ಫುಲ್‍ಟೈಮ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಅಡಿಯಿಟ್ಟಿದ್ದಾರೆ. ಪಕ್ಷದ ಅನುಮೋದನೆಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ’ ಎಂದಿದ್ದಾರೆ ಪಕ್ಷದ ಮುಖ್ಯಸ್ಥರಾಗಿರುವ ಹಾಗೂ ಐಐಟಿ ದಿಲ್ಲಿಯ 2015ರ ಪದವಿಧರ ನವೀನ್ ಕುಮಾರ್.

ಈ ಪಕ್ಷವನ್ನು 2019ರ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಕಟ್ಟಲಾಗಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ ಪಕ್ಷದ ಸದಸ್ಯರು. ‘ಏನೋ ದೊಡ್ಡ ಕನಸು ಹೊತ್ತು ಸಣ್ಣ ಪಕ್ಷಗಳಂತೆ ನಾವು ಆತುರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಹೋಗುತ್ತಿಲ್ಲ. 2020ರ ಬಿಹಾರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಮುಂದಿನ ಲೋಕಸಭೆಗೆ ಸ್ಪರ್ಧಿಸುತ್ತೇವೆ’ ಎಂದು ನವೀನ್ ತಿಳಿಸಿದ್ದಾರೆ.

ಈ ರಾಜಕೀಯ ಪಕ್ಷದಲ್ಲಿರುವ ಸದಸ್ಯರೆಲ್ಲರೂ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಹಿಂದುಳಿದ ವರ್ಗದವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಶಿಕ್ಷಣ ಮತ್ತು ಉದ್ಯೋಗ ಸವಲತ್ತುಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ರಾಜಕೀಯಕ್ಕೆ ಅಡಿಯಿಟ್ಟಿದ್ದಾರೆ.

ಈಗಾಗಲೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪಕ್ಷದ ಪ್ರಚಾರ ಆರಂಭಿಸಿರುವ ಇವರ ಬ್ಯಾನರ್‌ನಲ್ಲಿ ಬಿ ಆರ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್ ಮತ್ತು ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಇತರರು ಇದ್ದಾರೆ.

‘ಒಮ್ಮೆ ನೋಂದಾಯಿಸಿಕೊಂಡ ಬಳಿಕ ಸಣ್ಣ ಸಣ್ಣ ಘಟಕಗಳಾಗಿ ವಿಂಗಡಿಸಿ ಜತೆಯಾಗಿ ಕೆಲಸ ಮಾಡಲಿದ್ದೇವೆ. ಈಗಾಗಲೆ ಕೆಲಸ ಆರಂಭಿಸಿದ್ದು ನಾವು ಯಾವುದೇ ಪಕ್ಷದ ಅಥವಾ ಸಿದ್ಧಾಂತಗಳಿಗೆ ವಿರುದ್ಧ ಅಲ್ಲ’ ಎಂದಿದ್ದಾರೆ ಕುಮಾರ್.

Comments are closed.