ದೆಹಲಿ: ಟೀ, ಕಾಫಿ, ತಿಂಡಿ ತಿನಿಸಿಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕಚೇರಿ ಈ ಮೂರು ವರ್ಷಗಳಲ್ಲಿ ಖರ್ಚು ಮಾಡಿದ್ದು ಬರೋಬ್ಬರಿ 1.3 ಕೋಟಿ. ರೂಗಳನ್ನು.
ಹೌದು, ಆರ್ಟಿಐ ಕಾರ್ಯಕರ್ತ, ಉತ್ತರಾಖಂಡದ ಹಲ್ದ್ವಾನಿ ಮೂಲದ ಹೇಮಂತ್ ಸಿಂಗ್ ಗೌನಿಯಾ ಎಂಬವರು ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಿರುವ ದೆಹಲಿ ಮುಖ್ಯಮಂತ್ರಿ ಕಚೇರಿ, ಈ ಮೂರು ವರ್ಷಗಳಲ್ಲಿ ತಿಂಡಿ ತಿನಿಸಿಗಾಗಿ 1,03,04,162 ರೂ. ಗಳನ್ನು ಖರ್ಚು ಮಾಡಿರುವುದಾಗಿ ಹೇಳಿದೆ.
ಮುಖ್ಯಮಂತ್ರಿ ಕಚೇರಿಯ ತಿಂಡಿ ತಿನಿಸಿನ ಈ ಖರ್ಚು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಕೂಡ ಇದೀಗ ಬಹಿರಂಗವಾಗಿದೆ. 2015-16ರಲ್ಲಿ ರೂ. 23.12 ಲಕ್ಷಗಳಿದ್ದ ವೆಚ್ಚ, 2016-17ರ ಹೊತ್ತಿಗೆ ದ್ವಿಗುಣಗೊಂಡು ರೂ. 46.54 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು 2017-18ರಲ್ಲಿ ಈ ವರೆಗೆ ರೂ. 33.36 ಲಕ್ಷ ಖರ್ಚಾಗಿದೆ ಎಂದು ಮಾಹಿತಿ ನೀಡಿದೆ.
ಇನ್ನು ಆರ್ಟಿಐ ಅಡಿಯಲ್ಲಿ ಈ ಮಾಹಿತಿಯನ್ನು ಪಡೆದುಕೊಂಡಿರುವ ಹೇಮಂತ್ ಸಿಂಗ್ ಗೌನಿಯಾ ಈ ಬಗ್ಗೆ ಪ್ರತಿಕ್ರಿಯಿಸಿ, ” ಈ ರೀತಿಯ ದುಂದು ವೆಚ್ಚವನ್ನು ಸರ್ಕಾರ ನಿಯಂತ್ರಿಸಬೇಕು. ಒಂದು ಹೊತ್ತಿನ ಊಟವೂ ಸಿಗದ ಬಡವರಿಗೆ ಈ ಹಣವನ್ನು ವಿನಿಯೋಗಿಸಿದರೆ ಒಳಿತು. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲಿದೆ ಎಂದು ನಾನು ಭಾವಿಸಿದ್ದೇನೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
Comments are closed.