ರಾಷ್ಟ್ರೀಯ

ಕುಟುಂಬದ ಸ್ತ್ರೀಯರ ರಕ್ಷಣೆಗೆ ಅತ್ತೆಯಂದಿರು ಮುಂದಾಗಲಿ: ಪ್ರಧಾನಿ ಮೋದಿ ಆಶಯ

Pinterest LinkedIn Tumblr


ಝುಂಝುನು: ”ಹೆಣ್ಣು ಮಕ್ಕಳು ಹೊರೆಯಲ್ಲ. ಬದಲಾಗಿ ಇಡೀ ಕುಟುಂಬದ ಹೆಮ್ಮೆ ಮತ್ತು ಸಂಪತ್ತು. ಹೆಣ್ಣು ಮಕ್ಕಳ ವಿಷಯದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ,” ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ರಾಜಸ್ಥಾನದಲ್ಲಿ ಗುರುವಾರ ರಾಷ್ಟ್ರೀಯ ಪೋಷಕಾಂಶ ಯೋಜನೆ ಮತ್ತು ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮದ ವಿಸ್ತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ”ಪ್ರತಿಯೊಬ್ಬರೂ ಸಮಾನರೇ. ಗಂಡುಮಕ್ಕಳಂತೆಯೇ ಹೆಣ್ಣುಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು, ಅಗತ್ಯ. ಹೆಣ್ಣು ಮಕ್ಕಳು ದೇಶಕ್ಕೆ ಹೆಮ್ಮೆ ಮತ್ತು ಗೌರವ ತರುತ್ತಿದ್ದಾರೆ ಎನ್ನುವುದನ್ನು ಒಮ್ಮೆ ಗಮನಿಸಿ ನೋಡಿ,” ಎಂದರು.

ಹೆಣ್ಣು ಭ್ರೂಣ ಹತ್ಯೆ ಅತ್ಯಂತ ಅಪಮಾನಕರ ಎಂದು ಬಣ್ಣಿಸಿದ ಮೋದಿ, ಹೆಣ್ಣು ಮಕ್ಕಳ ರಕ್ಷಣೆಯ ನೇತೃತ್ವವನ್ನು ಅತ್ತೆಯಂದಿರು ವಹಿಸಬೇಕು ಎಂದರು. ”ಹೆಣ್ಣುಮಕ್ಕಳ ನಿರ್ಲಕ್ಷ್ಯ ಮತ್ತು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ಯುವಜನಾಂಗ ನಿಲ್ಲಿಸಬೇಕು. ಅತ್ತೆಯಂದಿರು ತಮ್ಮ ಕುಟುಂಬದ ಹೆಣ್ಣು ಮಕ್ಕಳ ರಕ್ಷಣೆಗೆ ಮುಂಚೂಣಿಗೆ ಬರಬೇಕು,” ಎಂದು ಮೋದಿ ಬಯಸಿದರು. ಜತೆಗೆ ಸರಕಾರವೂ ಈ ವಿಷಯಕ್ಕೆ ಜಾಗೃತಿ ಮೂಡಿಸಬೇಕು ಎಂದರು.

ವಿಸ್ತರಣೆ: ಪ್ರಸಕ್ತ ದೇಶದ 161 ಜಿಲ್ಲೆಗಳಲ್ಲಿರುವ ಬೇಟಿ ಬಚಾವೋ, ಬೇಟಿ ಪಢಾವೊ ಕಾರ್ಯಕ್ರಮವನ್ನು 640 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮೊದಲು ಮೋದಿ ಅವರು ಬೇಟಿ ಬಚಾವೋ, ಬೇಟಿ ಪಢಾವೊ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು ಮತ್ತು ಪ್ರಮಾಣ ಪತ್ರಗಳನ್ನು ನೀಡಿದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಉಪಸ್ಥಿತರಿದ್ದರು. ದೇಶದಲ್ಲಿ ಬಾಲ್ಯ ವಿವಾಹ ಪ್ರಮಾಣ 57ರಿಂದ 20 ಶೇಕಡಾಕ್ಕೆ ಇಳಿದಿದೆ, ಪೊಲೀಸ್‌ ಇಲಾಖೆ ನೇಮಕದಲ್ಲಿ ಶೇ. 33 ಮಹಿಳಾ ಮೀಸಲಾತಿಗೆ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಎಂದು ಮೇನಕಾ ಗಾಂಧಿ ವಿವರಿಸಿದರು.

ಕರ್ನಾಟಕಕ್ಕೂ ಪ್ರಶಸ್ತಿ

ಹೆಣ್ಣು-ಗಂಡು ಮಕ್ಕಳ ಲಿಂಗಾನುಪಾತ ಹೆಚ್ಚಳ ಸಾಧಿಸಿ ರಾಜಸ್ಥಾನದ ಝುಂಝುನು ಮತ್ತು ಸಿಕಾರ್‌ ಜಿಲ್ಲೆಗಳಿಗೆ ಪ್ರಶಸ್ತಿ ನೀಡಲಾಯಿತು. ಕರ್ನಾಟಕ, ಪಂಜಾಬ್‌, ಛತ್ತೀಸ್‌ಗಢ, ಸಿಕ್ಕಿಂ, ಗುಜರಾತ್‌, ಆಂಧ್ರ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಗಳಿಗೂ ಈ ಪ್ರಶಸ್ತಿ ಸಂದಿದೆ.

ಕೋಟಿ ಫಲಾನುಭವಿಗಳು ರಾಷ್ಟ್ರೀಯ ಪೌಷ್ಟಿಕಾಂಶ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಮಹಿಳೆಯರಲ್ಲಿ ಅಪೌಷ್ಟಿಕತೆ ಹೋಗಲಾಡಿಸುವುದು ಕಡಿಮೆ ತೂಕದ ಶಶಿಗಳ ಜನನ ಪ್ರಮಾಣ ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ.

ಝುಂಝುನುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಟಿ ಬಚಾವೋ, ಬೇಟಿ ಪಢಾವೊ ಕಾರ್ಯಕ್ರಮದ ಫಲಾನುಭವಿ ಮಗುವಿನ ಮುದ್ದು ಮಾತು ಆಲಿಸಿದ ಪ್ರಧಾನಿ ನರೇಂದ್ರ ಮೋದಿ.

Comments are closed.