ರಾಷ್ಟ್ರೀಯ

8ನೇ ತರಗತಿಯ ವಿದ್ಯಾರ್ಥಿನಿಗೆ ‘ಐ ಲವ್ ಯೂ’ ಎಂದ ಅಧ್ಯಾಪಕನಿಗೆ ಸಾಮೂಹಿಕ ಥಳಿತ!

Pinterest LinkedIn Tumblr

ವಿಳ್ಳುಪುರಂ: 8ನೇ ತರಗತಿಯ ವಿದ್ಯಾರ್ಥಿನಿಗೆ ಆಕೆಯ ಅಧ್ಯಾಪಕನೇ ಐ ಲವ್ ಯೂ ಹೇಳಿದ್ದಾನೆ ಎಂದು ಆರೋಪಿಸಿ ಆಕೆಯ ಪೋಷಕರು ಮನಸೋ ಇಚ್ಛೆ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ವಿಳ್ಳುಪುರಂನಲ್ಲಿ ಈ ಘಟನೆ ನಡೆದಿದ್ದು, ಚಿನ್ನ ಸೇಲಂ ಬಳಿಯ ಮೇಲೆನರಿಪ್ಪನೂರ್ ಗ್ರಾಮದ ಸೆಂಟ್ ಆ್ಯಂಟನಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ಆಕೆಯ ಅಧ್ಯಾಪಕ ನಿರ್ಮಲ್ ಎಂಬಾತನೇ ಪ್ರೀತಿಸುವುದಾಗಿ ಹೇಳಿದ್ದಾನೆ. ಅಲ್ಲದೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿ ಆಕೆ ಒಪ್ಪಿಗೆ ಕೂಡ ಪಡೆದಿದ್ದ. ಇದಕ್ಕಾಗಿ ತಮ್ಮ ಇಬ್ಬರು ಸಹೋದ್ಯೋಗಿಗಳ ನೆರವು ಕೂಡ ಆತ ಪಡೆದಿದ್ದನಂತೆ. ಸಹೋದ್ಯೋಗಿಗಳು ಬಾಲಕಿಯನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ. ಕಳೆದ ಫೆಬ್ರವರಿ 14ರಂದು ಬಾಲಕಿಗೆ ಅಧ್ಯಾಪಕ ತನ್ನ ಪ್ರೇಮ ನಿವೇದನೆ ಮಾಡಿದ್ದಾನೆ ಎನ್ನಲಾಗಿದೆ.

ಇದೀಗ ಈತನ ಕೃತ್ಯ ಬಾಲಕಿಯ ಮನೆಯವರಿಗೆ ತಿಳಿದಿದ್ದು, ಕೂಡಲೇ ಶಾಲೆಗೆ ಆಗಮಿಸಿದ ಪೋಷಕರು ಅಧ್ಯಾಪಕ ನಿರ್ಮಲ್ ಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ ಆತ ಇದೇ ಉೂರಿನಲ್ಲಿ ಇದ್ದರೆ ಕೊಂದು ಹಾಕುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇನ್ನು ಪೋಷಕರು ಅಧ್ಯಾಪಕನಿಗೆ ಥಳಿಸುತ್ತಿರುವ ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಅಧ್ಯಾಪಕನನ್ನು ವಶಕ್ಕೆ ಪಡೆದಿದ್ದಾರೆ. ಒಂದು ವೇಳೆ ಪೊಲೀಸರು ಆಗಮಿಸದೇ ಇದ್ದಿದ್ದರೇ ಆಕ್ರೋಶಿತ ಸಂಬಂಧಿಗಳು ಅಧ್ಯಾಪಕನನ್ನು ಹೊಡೆದು ಕೊಂದು ಹಾಕುತ್ತಿದ್ದರು ಎನ್ನಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಬಾಲಕಿ ಅಧ್ಯಾಪಕನ ವಿಚಾರ ಮನೆಯಲ್ಲಿ ತಿಳಿದರೆ, ಆವರು ನನ್ನನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ ನಾನು ಮನೆಯಲ್ಲಿ ಏನೂ ಹೇಳಲಿಲ್ಲ ಎಂದು ಹೇಳಿದ್ದಾಳೆ. ಆರೋಪಿ ಅಧ್ಯಾಪಕ ನಿರ್ಮಲ್ ಗೆ ಈಗಾಗಲೇ ಮದುವೆಯಾಗಿದ್ದು, ಇದೀಗ ಮತ್ತೆ 13 ವರ್ಷದ ಬಾಲಕಿಯನ್ನು ವಿವಾಹವಾಗುವುದಾಗಿ ಹೇಳಿ ವಂಚಿಸುತ್ತಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.