ಹೈದರಾಬಾದ್ : ಮಸೀದಿಗೆಂದು ಮುಡಿಪಾಗಿರುವ ಜಾಗವನ್ನು ಮಾರಲೂ ಆಗುವುದಿಲ್ಲ; ಉಡುಗೊರೆಯಾಗಿ ಕೊಡಲೂ ಆಗುವುದಿಲ್ಲ; ಪರಭಾರೆ ಮಾಡಲಿಕ್ಕೂ ಆಗುವುದಿಲ್ಲ ಎಂದು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಅಖೀಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್ಬಿ) ಸ್ಪಷ್ಟಪಡಿಸಿದೆ. ಈ ಮೂಲಕ ಅದು ತನ್ನ ಈ ವರೆಗಿನ ನಿಲುವನ್ನು ದೃಢಪಡಿಸಿದೆ.
ಐಎಂಪಿಎಲ್ಬಿ ಇದರ ಕ್ರಿಯಾ ಸಮಿತಿಯ ಸಭೆಯಲ್ಲಿ ಮಂಡಳಿಯು ಈ ವಿಷಯವನ್ನು ಸ್ಪಷ್ಟಪಡಿಸಿತು.
ಎಐಎಂಪಿಎಲ್ಬಿ ಹೊರಡಿಸಿರುವ ಹೇಳಿಕೆಯಲ್ಲಿ “ಶರೀಯ ಕಾನೂನಿನ ಮೂಲ ತತ್ವಕ್ಕೆ ಒತ್ತು ನೀಡಿ ಮಂಡಳಿಯು ಪುನಃ ಹೇಳಲು ಬಯಸವುದೇನೆಂದರೆ ಮಸೀದಿಗೆಂದು ಮುಡಿಪಾಡಿಗಿಟ್ಟಿರುವ ಜಾಗವನ್ನು ಮಾರಾಟ ಮಾಡಲಾಗದು; ಪರಭಾರೆ ಮಾಡಲಾದು ಅಥವಾ ಉಡುಗೊರೆಯಾಗಿಯೂ ನೀಡಲಾಗದು’ ಎಂದು ತಿಳಿಸಿದೆ.
ಎಐಎಂಪಿಎಲ್ ಬಿ ಇದರ ಕಾರ್ಯದರ್ಶಿ ಮಲಾನಾ ಉಮರೇನ್ ಮೆಹಫೂಜ್ ರೆಹಮಾನಿ ಅವರು ಮಂಡಳಿಯ ಈ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ರೆಹಮಾನಿ ಅವರ ಜತೆಗಿದ್ದು ಮಂಡಳಿಯ ಇಂಗ್ಲಿಷ್ ಹೇಳಿಕೆಯನ್ನು ಓದಿ ಹೇಳಿದರು.
ಹಾಗಿದ್ದರೂ ಮಂಡಳಿಯು ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಬದ್ಧವಾಗಿರುತ್ತದೆ ಎಂದು ರೆಹಮಾನಿ ಹೇಳಿದರು.
ಮಂಡಳಿಯ ಮೂರು ದಿನಗಳ 26ನೇ ಪ್ಲಿನರಿ ಅಧಿವೇಶನವು ನಿನ್ನೆ ಶುಕ್ರವಾರ ಸಂಜೆ ಇಲ್ಲಿ ಆರಂಭವಾಯಿತು.
ಸುಪ್ರೀಂ ಕೋರ್ಟ್ ನಿನ್ನೆ ಶುಕ್ರವಾರ, “ಅಯೋಧ್ಯೆ ವಿವಾದವನ್ನು ತಾನು ಕೇವಲ ಭೂ ವಿವಾದದ ನೆಲೆಯಲ್ಲಿ ವಿಚಾರಣೆ ಮಾಡುವುದಾಗಿ’ ಹೇಳಿತ್ತು.
-ಉದಯವಾಣಿ