ರಾಷ್ಟ್ರೀಯ

ಪಟೇಲರು ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದರೆ ಇಡೀ ಕಾಶ್ಮೀರ ನಮ್ಮದಾಗಿರುತ್ತಿತ್ತು: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಸರ್ದಾರ್ ಪಟೇಲರು ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದರೆ, ಇಡೀ ಕಾಶ್ಮೀರ ಭಾರತದ್ದಾಗುತ್ತಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.

ಕೇಂದ್ರ ಬಜೆಟ್ ಅಧಿವೇಶನ 2018 ಕುರಿತು ಸಂಸತ್ತಿನಲ್ಲಿ ಭಾಷಣ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್’ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿನ್ನೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ್ದರು. ಬಶೀರ್ ಭದ್ರ ಶಾಯರಿಯಿಂದ ಭಾಷಣ ಆರಂಭಿಸಿದ್ದರು, ಖರ್ಗೆ ಬಶೀರ್ ಶಾಯರಿ ಉಲ್ಲೇಖ ಮಾಡಿದ್ದರು. ಖರ್ಗೆಯವರ ಶಾಯರಿ ಕರ್ನಾಟಕದ ಮುಖ್ಯಮಂತ್ರಿಗಳು ಕೇಳಿಸಿಕೊಂಡಿರಬಹುದು. ಖರ್ಗೆಯವರು ಕರ್ನಾಟಕದ ಜನತೆಯನ್ನುದ್ದೇಶಿಸಿ ಮಾತನಾಡಿದ್ದರಾ ಅಥವಾ ತಮ್ಮದೇ ಸರ್ಕಾರದ ನೀತಿ- ನಿರ್ಧಾರಗಳ ಬಗ್ಗೆ ಭಾಷಣ ಮಾಡಿದ್ದರಾ? ನೀವು ದೇಶವನ್ನೇ ವಿಭಜಿಸಿದ್ದೀರಿ. ಭಾರತದ ವಿಭಜನೆ ಮಾಡಿರುವುದು ನಿಮ್ಮ ಚರಿತ್ರೆಯಲ್ಲಿದೆ. ಸ್ವಾತಂತ್ರ್ಯ ಸಿಕ್ಕ 70 ವರ್ಷಗಳಿಂದಲೂ ನಿಮ್ಮ ಪಾಪದ ಕೃತ್ಯ ನಡೆದಿದೆ. ನಿಮ್ಮ ಈ ಕಾರ್ಯಕ್ಕೆ 125 ಕೋಟಿ ಜನ ಪಾಠ ಕಲಿಸಿದ್ದಾರೆ.

1947ರಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಭಾರತವನ್ನು ಇಬ್ಭಾಗ ಮಾಡಿದಂತೆ ಆಂಧ್ರಪ್ರದೇಶ ರಾಜ್ಯವನ್ನು ಕಾಂಗ್ರೆಸ್ ಇಬ್ಭಾಗ ಮಾಡಿತ್ತು. ಸರ್ದಾರ್ ಪಟೇಲ್ ಅವರು ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದಿದ್ದರೆ, ಇಡೀ ಕಾಶ್ಮೀರ ನಮ್ಮದಾಗುತ್ತಿತ್ತು. ಇದು ನಿಮ್ಮ ಗುಣಲಕ್ಷಣಗಳು.

ನೀವು ಭಾರತವನ್ನು ಇಬ್ಭಾಗ ಮಾಡಿದಿರಿ. ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದರೂ ಇಂದಿಗೂ ದೇಶದಲ್ಲಿರುವ 125 ಕೋಟಿ ಭಾರತೀಯರು ಬೆಲೆ ತೆರಬೇಕಾಗಿದೆ. ನೀವು ಮಾಡಿದ ಪಾಪದ ಕೃತ್ಯಕ್ಕೆ ಶಿಕ್ಷಿಸಿದೇ ಒಂದೇ ಒಂದು ದಿನ ಕೂಡ ಸಾಗುವುದಿಲ್ಲ. ತರಾತುರಿಯಲ್ಲಿ ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ದಕ್ಷಿಣ ರಾಜ್ಯವನ್ನು ವಿಂಗಡಣೆ ಮಾಡಿತು.

ಹೊಸ ರಾಜ್ಯವನ್ನು ಸ್ಥಾಪನೆ ಮಾಡುವುದರ ಕುರಿತು ನಾವು ಮಾತನಾಡಿದರೆ, ಅಟಲ್ ಬಿಹಾರಿ ವಾಜಪೇಯಿಯವರು ಸ್ಥಾಪನೆ ಮಾಡಿದ್ದ ಉತ್ತರಾಖಂಡ್, ಜಾರ್ಖಾಂಡ್ ಹಾಗೂ ಛತ್ತೀಸ್ಗಢವನ್ನು ನೆನೆಯುತ್ತೇವೆ. ದೂರದೃಷ್ಟಿಯಿಂದ ಹೇಗೆ ನಿರ್ಧಾರ ಕೈಗೊಳ್ಳಬೇಕೆಂಬುದನ್ನು ಅವರು ತೋರಿಸಿಕೊಟ್ಟಿದ್ದರು.

ಕಾಂಗ್ರೆಸ್ ದೇಶವನ್ನು ಇಬ್ಭಾಗ ಮಾಡಿತು. ಒಂದು ಪಕ್ಷ ಒಂದು ಕುಟುಂಬಕ್ಕಾಗಿ ತನ್ನೆಲ್ಲಾ ಶಕ್ತಿಯನ್ನು ಮೀಸಲಿಟ್ಟಿತು. ಒಂದು ಕುಟುಂಬದ ಹಿತಾಸಕ್ತಿಯನ್ನು ಇಡೀ ದೇಶದ ಹಿತಾಸಕ್ತಿಯಂತೆ ನೋಡಲಾಯಿತು. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರವೇ ಉದಯಿಸಿದ್ದು ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಈ ದೇಶದಲ್ಲಿ ಪ್ರಜಾತಂತ್ರ ಬಂದಿದ್ದು, ನೆಹರೂ ಹಾಗೂ ಕಾಂಗ್ರೆಸ್ ನಿಂದ ಎಂದು ಹೇಳಿಕೊಂಡು ಬಂದಿದ್ದಾರೆ.

ನೆಹರೂ ಅವರಿಂದ ಭಾರತ ಪ್ರಜಾಪ್ರಭುತ್ವವನ್ನು ಪಡೆಯಲಿಲ್ಲ. ಶತಮಾನಗಳ ಹಿಂದಿನ ನಮ್ಮ ಶ್ರೀಮಂತ ಇತಿಹಾಸವನ್ನು ನೋಡಿ, ನಮ್ಮ ಇತಿಹಾಸದಲ್ಲಿ ಶ್ರೀಮಂತ ಪ್ರಜಾಪ್ರಭುತ್ವದ ಸಂಪ್ರದಾಯಗಳ ಅನೇಕ ಉದಾಹರಣೆಗಳಿವೆ. ಪ್ರಜಾಪ್ರಭುತ್ವ ಈ ರಾಷ್ಟ್ರದ ಅವಿಭಾಜ್ಯವಾಗಿದೆ ಮತ್ತು ನಮ್ಮ ಸಂಸ್ಕೃತಿಯಲ್ಲಿದೆ ಎಂದು ಹೇಳಿದ್ದಾರೆ.

ರಾಜೀವ್ ಗಾಂಧಿಯವರು ಹೈದರಾಬಾದ್’ಗೆ ಹೋದಾಗ ಅಲ್ಲಿನ ಮುಖ್ಯಮಂತ್ರಿ-ದಲಿತ ಸಮುದಾಯದ ಟಿ.ಆಂಜಯ್ಯ ಅವರ ಜತೆ ಕೆಟ್ಟದಾಗಿ ನಡೆದುಕೊಂಡರು. ಅವರ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿತ್ತು. ಆ ಅವಮಾನದ ಬೆಂಕಿಯಲ್ಲಿ ಹುಟ್ಟಿದ್ದೇ ಎನ್.ಟಿ.ರಾಮಾ ರಾವ್ ಅವರ ತೆಲುಗು ದೇಶ ಪಕ್ಷಂ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಬಗ್ಗೆ ನಮಗೆ ಪಾಠ ಮಾಡಬೇಡಿ. ಕಾಂಗ್ರೆಸ್ ನವರು ಪಂಜಾಬ್ ನಲ್ಲಿ ಅಕಾಲಿ ದಳದ ಜೊತೆಗೆ ಏನು ಮಾಡಿತು? ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಏನು ಮಾಡಿದೆ? ತಮ್ಮ ಮನಸ್ಸಿಗೆ ಬಂದಂತೆ ಎಷ್ಟು ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ್ದೀರಿ. ಪ್ರಜಾಪ್ರಭುತ್ವದ ಬಗ್ಗೆ ಎಲ್ಲದ್ದನ್ನು ಇದು ಎತ್ತಿ ತೋರಿಸುತ್ತದೆ. ಆದರೆ, ನೀವು ಪ್ರಜಾತಂತ್ರದ ಬಗ್ಗೆ ಮಾತನಾಡುತ್ತೀರಿ. ಹಿಂದಿನ ಸರ್ಕಾರಗಳಿಗಿಂತ ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್’ಡಿಎ ಸರ್ಕಾರ ಹೆಚ್ಚಿನ ಪ್ರಮಾಣದ ರಸ್ತೆ ನಿರ್ಮಾಣ ಮಾಡುತ್ತಿದೆ. ದೇಶದಾದ್ಯಂತ ಎಲ್ಲಾ ವಲಯಗಳ ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನವನ್ನು ನೀಡಿದೆ.

ಆಂಧ್ರಪ್ರದೇಶ ಹೆಮ್ಮೆಯ ಪುತ್ರ ನೀಲಂ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ ಹೇಗೆ ಅವಮಾನ ಮಾಡಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ. ಭಾರತದಲ್ಲಿ ಯಾರೂ ಪ್ರಜಾತಂತ್ರದ ಪಾಠವನ್ನು ಕಾಂಗ್ರೆಸ್ ನಿಂದ ಕಲಿಯುವ ಅಗತ್ಯವಿಲ್ಲ. ಸರ್ದಾರ್ ಪಟೇಲ್ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ. ಪಟೇಲ್ ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದಿದ್ದರೆ ಜಮ್ಮು ಮತ್ತು ಕಾಶ್ಮೀರ ಇಂದು ಇಬ್ಬಾಗವಾಗುತ್ತಿರಲಿಲ್ಲ. ಇಡೀ ಕಾಶ್ಮೀರ ಭಾರತದ್ದಾಗುತ್ತಿತ್ತು.

ಯಾವ ಪಕ್ಷದ ಶಾಸಕರು ಹಾಗೂ ಸಂಸದರು ಎಂದು ನಾವು ಭೇದ ಮಾಡಲ್ಲ. ಬೀದರ್-ಕಲಬುರಗಿ 110 ಕಿ.ಮೀ ರೈಲ್ವೇ ಯೋಜನೆಯನ್ನು ಮಂಜೂರು ಮಾಡಿದ್ದು, ಅಟಲ್ ಬಿಹಾರಿ ವಾಜಪೇಟಿ ಸರ್ಕಾರ. ಅದನ್ನು ಪೂರ್ತಿ ಮಾಡಲು ಹಣಕಾಸು ಬಿಡುಗಡೆ ಮಾಡಿದ್ದು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ. ಯಾವ ಯೋಜನೆ, ಅಲ್ಲಿ ಯಾರು ಶಾಸಕರು ಹಾಗೂ ಸಂಸದರು ಯಾರು ಎಂಬುದನ್ನು ನಾವು ನೋಡುವುದಿಲ್ಲ. ಆ ಯೋಜನೆ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಿದ್ದು ನಾನೇ ಎಂಬುದನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೆನಪಿಸಲು ಇಚ್ಛಿಸುತ್ತೇನೆ. ಕರ್ನಾಟಕ ರೈಲ್ವೇ ಬಗ್ಗೆ ಹೇಳಿದರೆ ಖರ್ಗೆಯವರು ಎದೆ ಉಬ್ಬಿಸುತ್ತಾರೆಂದು ವಾಗ್ದಾಳಿ ನಡೆಸಿದ್ದಾರೆ.

Comments are closed.