ರಾಷ್ಟ್ರೀಯ

ತ್ರಿವಳಿ ತಲಾಖ್‌ ನಿಷೇಧ ವಿಧೇಯಕ: ಮುಲಾಯಂ ಕಿರಿಯ ಸೊಸೆ ಬೆಂಬಲ

Pinterest LinkedIn Tumblr


ಲಖನೌ: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್‌ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ ತ್ರಿವಳಿ ತಲಾಖ್‌ ನಿಷೇಧ ವಿಧೇಯಕವನ್ನು ಬೆಂಬಲಿಸಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರ ಮಂಡಿಸಿರುವ ಈ ವಿಧೇಯಕವನ್ನು ವಿರೋಧಿಸುವುದು ಸಮಾಜವಾದಿ ಪಕ್ಷದ ಅಧಿಕೃತ ನೀತಿ. ಆದರೆ ಇದಕ್ಕೆ ವಿರುದ್ಧವಾಗಿ ಮುಲಾಯಂ ಸೊಸೆ ವಿಧೇಯಕವನ್ನು ಬೆಂಬಲಿಸಿ ಮಾತನಾಡಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಸಮಾಜವಾದಿ ಪಕ್ಷದ ನೀತಿಗೆ ವಿರುದ್ಧವಾಗಿ ಅಪರ್ಣಾ ಯಾದವ್‌ ಮಾತನಾಡಿದ್ದರು. ಇದೀಗ ತ್ರಿವಳಿ ತಲಾಖ್‌ ನಿಷೇಧಿಸುವ ವಿಧೇಯಕವನ್ನು ಸ್ವಾಗತಿಸಿ ಟ್ವೀಟ್‌ ಮಾಡಿದ್ದಾರೆ.

‘ಇದೊಂದು ಸ್ವಾಗತಾರ್ಹ ಬೆಳವಣಿಗೆ. ನಿರ್ದಿಷ್ಟವಾಗಿ ಮುಸ್ಲಿಂ ಮಹಿಳೆಯರಿಗಷ್ಟೇ ಅಲ್ಲ, ಸಾರ್ವತ್ರಿಕವಾಗಿ ಎಲ್ಲ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇಟ್ಟಿರುವ ದಿಟ್ಟ ಹೆಜ್ಜೆಯಿದು. ಮುಸ್ಲಿಂ ದೀರ್ಘಕಾಲದಿಂದ ದುಃಖಿತರಾಗಿದ್ದ ಮುಸ್ಲಿಂ ಮಹಿಳೆಯರ ಕಣ್ಣೊರೆಸುವ ಪ್ರಯತ್ನವಿದು’ ಎಂದು ಅಪರ್ಣಾ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ನಿಲುವಿಗೆ ಸಂಪೂರ್ಣ ವಿರುದ್ಧ ನಿಲುವನ್ನು ಅಪರ್ಣಾ ಯಾದವ್‌ ತಾಳಿದ್ದಾರೆ. ಇವರು ಮುಲಾಯಂ ಸಿಂಗ್‌ ಯಾದವರ ಎರಡನೇ ಪುತ್ರ ಪ್ರತೀಕ್‌ ಯಾದವ್‌ ಪತ್ನಿ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದಾಗ ಅಪರ್ಣಾ ಯಾದವ್‌ ಮತ್ತು ಪ್ರತೀಕ್‌ ದಂಪತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದರು.

ಅದಕ್ಕೆ ಮುಂಚೆ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್‌ ಅವರ ಜತೆ ಲಖನೌದಲ್ಲಿ ಇಫ್ತಾರ್‌ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಸೆಲ್ಪೀ ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಇವೆಲ್ಲ ಬೆಳವಣಿಗೆಗಳು ಸಮಾಜವಾದಿ ಪಕ್ಷದ ಜತೆಗೆ ಅವರ ಬಾಂಧವ್ಯ ಚೆನ್ನಾಗಿಲ್ಲ ಎಂಬುದನ್ನು ಬಹಿರಂಗಪಡಿಸಿವೆ.

Comments are closed.