
ನವದೆಹಲಿ: ಸಕಲೇಶಪುರದಲ್ಲಿ ತಾನು ನಿರ್ಮಿಸಲು ಉದ್ದೇಶಿಸಿರುವ ಆನೆ ಕಾರಿಡಾರ್ಗಾಗಿ ಕೇಂದ್ರ ಸರ್ಕಾರ ತನಗೆ ನೀಡಿರುವ ಕ್ಯಾಂಪಾ (ಪರಿಹಾರ ರೂಪದ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ) ನಿಧಿಯಲ್ಲಿನ ಹಣವನ್ನು ಬಳಸಿಕೊಳ್ಳಲು
ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಗುರುವಾರ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ಪಶು ಸಂಗೋಪನಾ ಸಚಿವ ಎ. ಮಂಜು ಈ ವಿಚಾರ ತಿಳಿಸಿದ್ದಾರೆ. “”ಉದ್ದೇಶಿತ ಆನೆ ಕಾರಿಡಾರ್ಗೆ ಈಗಾಗಲೇ 2,500 ರೈತರು ತಮ್ಮ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಈ ಭೂಮಿಯ ಜತೆಗೆ ಸರ್ಕಾರಿ ಭೂಮಿಯನ್ನೂ ಸೇರಿಸಿ ವಿಶಾಲವಾದ ಆನೆ ಕಾರಿಡಾರ್ ನಿರ್ಮಿಸಲು
ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡಿರುವ ಕ್ಯಾಂಫಾ ನಿಧಿಯಲ್ಲಿ ಸುಮಾರು 300 ಕೋಟಿ ರೂ.ಗಳಷ್ಟು ಹಣ ನಿರುಪಯುಕ್ತವಾಗಿ ಉಳಿದಿರುವುದರಿಂದ ಆ ಹಣವನ್ನು ಈ ಯೋಜನೆಯ ಖಾಸಗಿ ಭೂ ಸ್ವಾಧೀನಕ್ಕೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಆಲೋಚಿಸಿದೆ. ಇದಕ್ಕೆ ಕೇಂದ್ರದ ಒಪ್ಪಿಗೆ ಬೇಕಾಗಿರುವುದರಿಂದ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ” ಎಂದು ಅವರು ತಿಳಿಸಿದರು.
ಸಕಲೇಶಪುರದಲ್ಲಿ ಆನೆಗಳ ಹಾವಳಿಯಿಂದ ಕಳೆದ ಐದಾರು ವರ್ಷಗಳಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಇಂಥ ಅವಘಡಗಳನ್ನು ತಪ್ಪಿಸಲು ಆನೆ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕಾರಿಡಾರ್ನಿಂದ ರೈತರಿಗೂ, ಆನೆಗಳಿಗೂ ನೆಮ್ಮದಿ ಸಿಗಲಿದೆ.
ಎ. ಮಂಜು, ಕರ್ನಾಟಕ ಪಶು ಸಂಗೋಪನಾ ಸಚಿವ
-ಉದಯವಾಣಿ
Comments are closed.