ರಾಷ್ಟ್ರೀಯ

ಮಗನಿಗೆ ‘ದಯಾಮರಣ’ ನೀಡಿ: ಮೋದಿಗೆ ಪತ್ರ

Pinterest LinkedIn Tumblr


ರಾಜ್‌ಕೋಟ್‌: ಪ್ರತೀ 10 ನಿಮಿಷಕ್ಕೆ ಮೈಯೆಲ್ಲಾ ಸೂಜಿ ಚುಚ್ಚಿದಂಥ ಅಸಾಧ್ಯ ನೋವಿನಿಂದ ತಮ್ಮ 12 ವರ್ಷದ ಮಗ ಚೀರುತ್ತಿದ್ದರೆ, ಆತ ಪಡುತ್ತಿರುವ ಪಾಡು ನೋಡಿ ಹೆತ್ತವರಿಗೆ ಕರಳು ಕಿತ್ತು ಬರುವಂತಾಗುವುದು.

ದಿನೇ ದಿನೇ ಸಾವಿಗೆ ಸಮೀಪಿಸುತ್ತಿರುವ ಮಗನ ವೇದನೆ ನೋಡಲಾಗದೆ, ಮಗನಿಗೆ ‘ದಯಾಮರಣ’ಕ್ಕೆ ಅನುಮತಿ ನೀಡಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಹೆತ್ತವರು.

ವಜ್ರ ಪಾಲಿಷ್‌ ಮಾಡಿ ಜೀವನ ಸಾಗಿಸುತ್ತಿರುವ ದಿನೇಶ್‌ ಮೈಸೂರ್ಯ ತಮ್ಮ ಮಗ ಪಾರ್ಥ ಎರಡು ವರ್ಷದಿಂದ ಪಡುತ್ತಿರುವ ಸಂಕಟವನ್ನು ನೋಡಲಾರದೆ ‘ದಯಾಮರಣ’ ನೀಡಿ ನನ್ನ ಮಗನನ್ನು ನೋವಿನಿಂದ ಪಾರು ಮಾಡಿ’ ಎಂದು ಪ್ರಧಾನಿಗೆ ಪತ್ರ ಬರೆದು ಕೇಳಿಕೊಂಡಿದ್ದಾರೆ.

ವರ್ಷದ ಹಿಂದೆ ಅಮ್ರೆಲಿ ಟೌನ್‌ನಲ್ಲಿರುವ ದಿನೇಶ್ ದಂಪತಿ ಮೋದಿಗೆ ಪತ್ರ ಬರೆದು ತಮ್ಮ ಮಗನ ಅನಾರೋಗ್ಯದ ಕುರಿತು ಹೇಳಿದ್ದರು. ಈ ಪತ್ರಕ್ಕೆ ಕೂಡಲೇ ಸ್ಪಂದಿಸಿದ ಮೋದಿ 12 ವರ್ಷದ ಬಾಲಕನಿಗೆ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದರು. ಆದರೆ ಆ ಬಾಲಕನ ನರರೋಗ ದಿನದಿಂದ-ದಿನಕ್ಕೆ ಹೆಚ್ಚಾಗುತ್ತಿದೆ. ವೈದ್ಯರು ಕೂಡ ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪಾರ್ಥ ಎಸ್‌ಎಸ್‌ಪಿಇ(subacute sclerosing panencephalitis) ಎಂಬ ಅಪರೂಪದ ಮಾರಾಣಾಂತಿಕ ರೋಗದಿಂದ ಬಳಲುತ್ತಿದ್ದಾನೆ. ಈ ನರರೋಗ ಬಂದವರ ದೇಹ ಸ್ವಾಧೀನ ಕಳೆದುಕೊಳ್ಳುತ್ತದೆ, ಮಾನಸಿಕ ಅಸ್ವಸ್ಥರಾಗುತ್ತಾರೆ.

ದಿನೇಶ್‌ ‘ನನ್ನ ಮಗ ಈ ಕಾಯಿಲೆಯಿಂದ ನರಳಿದಂತೆ ಮತ್ಯಾರೂ ನರಳಬಾರದು. ನನ್ನ ಮಗನನ್ನು ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲು ಅನುಮತಿ ನೀಡುತ್ತೇನೆ. ಯಾವುದಾದರೂ ಹೊಸ ಮದ್ದುಗಳನ್ನು ಕಂಡು ಹಿಡಿದು ಮಗನ ಮೇಲೆ ಪ್ರಯೋಗ ಮಾಡಿ, ಅದು ಸಾಧ್ಯವಾಗದಿದ್ದರೆ ಮಗನಿಗೆ ದಯಾಮರಣ ನೀಡಿ’ ಎಂದು ಕೇಳಿ ಕೊಂಡಿದ್ದಾರೆ.

ಆದರೆ ದಯಾಮರಣಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ.

ಪಾರ್ಥ ದ್ರವಾಹಾರಗಳನ್ನಷ್ಟೇ ಸೇವಿಸುತ್ತಾನೆ. ಪ್ರತೀ 10 ನಿಮಿಷಕ್ಕೆ ಆತ ಪಡುವ ವೇದನೆ ನೋಡಿದರೆ ಎಂಥವರಿಗೂ ಸಂಕಟವಾಗುವುದು.

‘ಕಳೆದ 15 ತಿಂಗಳಿನಿಂದ ನಮ್ಮ ಮಗ ಪಡುತ್ತಿರುವ ವೇದನೆ ಇನ್ನು ಮುಂದೆ ನೋಡಲು ಸಾಧ್ಯವಿಲ್ಲ. ದಯಾಮರಣ ನೀಡಿ’ ಎನ್ನುವುದು ದಿನೇಶ್‌ ಅವರ ಮನವಿಯಾಗಿದೆ.

Comments are closed.