ನವದೆಹಲಿ: ನೋಟ್ ಬ್ಯಾನ್ ಬಗ್ಗೆ ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಸತ್ತಿನ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಭ್ರಷ್ಟಾಚಾರವಿದು. ಪ್ರಧಾನಿ ಮೋದಿ ದೇಶದ ಉದ್ದಗಲಕ್ಕೂ ಮಾತನಾಡುತ್ತಾರೆ. ಆದರೆ ಸಂಸತ್ತಿನಲ್ಲಿ ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಲೋಕಸಭೆಯಲ್ಲಿ ಮಾತನಾಡಲು ಅವರು ನನಗೆ ಅವಕಾಶವೇ ನೀಡುತ್ತಿಲ್ಲ. ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದಾಗ ಅವರು ಓಡಿ ಹೋಗುತ್ತಾರೆ ಎಂದು ಸರ್ಕಾರವನ್ನು ರಾಹುಲ್ ಟೀಕಿಸಿದರು.
ಕಳೆದ ಒಂದು ತಿಂಗಳಿನಿಂದ ನಾವು ನೋಟ್ ಬ್ಯಾನ್ ಬಗ್ಗೆ ಚರ್ಚೆ ನಡೆಸಬೇಕೆಂದು ಆಗ್ರಹಿಸುತ್ತಿದ್ದೇವೆ. ಆದರೆ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಲು ಹೆದರುತ್ತಿದ್ದಾರೆ. ಅವರು ಸಂಸತ್ತಿನಲ್ಲಿದ್ದರೂ ಲೋಕಸಭೆಯಲ್ಲಿ ಕುಳಿತುಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯಾವ ಕಾರಣಕ್ಕೆ ಮೋದಿಗೆ ಮಾತನಾಡಲು ಇಷ್ಟೊಂದು ಹೆದರಿಕೆ? ಆರಂಭದಲ್ಲಿ ಕಪ್ಪು ಹಣದ ಬಗ್ಗೆ ಮಾತನಾಡಿದ ಅವರು ಈಗ ಕ್ಯಾಶ್ ಲೆಸ್ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಲೋಕಸಭೆಗೆ ಬಂದು ನಮ್ಮ ಜೊತೆ ಚರ್ಚಿಸಬಹುದಲ್ಲ ಎಂದು ಹೇಳುವ ಮೂಲಕ ರಾಹುಲ್ ಮೋದಿಯನ್ನು ತರಾಟೆಗೆ ತೆಗೆದುಕೊಂಡರು.
Comments are closed.