ಮಥುರಾ: ಮಥುರಾ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ವೇಳೆ ಗುರುವಾರ ಪ್ರತಿಭಟನಾಕಾರರ ಜತೆ ನಡೆದ ಘರ್ಷಣೆಯಲ್ಲಿ ನಗರ ಎಸ್ಪಿ ಹಾಗೂ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಸೇರಿದಂತೆ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಘಟನೆಯ ತನಿಖೆಗೆ ಸೂಚಿಸಿದ್ದಾರೆ. ಘಟನೆ ಸಂಬಂಧ 320 ಜನರನ್ನು ಬಂಧಿಸಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಅಖಿಲೇಶ್ ಯಾದವ್ ಜತೆ ಮಾತನಾಡಿ, ಜನರ ಸಾವಿಗೆ ದುಃಖ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಅಗತ್ಯ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಎಸ್ಪಿ ಮುಕುಲ್ ದ್ವಿವೇದಿ ಅವರು ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.
ಇಲ್ಲಿನ ಜವಾಹರ್ ಬಾಗ್ನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ನಿವಾಸಿಗಳನ್ನು ಅಲಹಾಬಾದ್ ಹೈಕೋರ್ಟ್ ನಿರ್ದೇಶನದಂತೆ ತೆರವುಗೊಳಿಸಲು ಪೊಲೀಸರು ಮುಂದಾದಾಗ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ಸಂಘಟನೆಯ ಸದಸ್ಯರ ಜತೆ ಘರ್ಷಣೆ ಆರಂಭವಾಯಿತು.
ಅಲ್ಲಿ ನೆರೆದಿದ್ದ ಮೂರು ಸಾವಿರ ಒತ್ತುವರಿದಾರರು ಕಲ್ಲು ತೂರಿ, ಗುಂಡು ಹಾರಿಸಿದ್ದರಿಂದ ಘರ್ಷಣೆ ತೀವ್ರ ಸ್ವರೂಪ ಪಡೆದು ಜನರು ಸಾವಿಗೀಡಾಗಿದ್ದಾರೆ.
ಆರಂಭದಲ್ಲಿ ಜನರ ಪ್ರತಿಭಟನೆ ಶಾಂತಿಯುತವಾಗಿಯೇ ಸಾಗಿತ್ತಾದರೂ, ಶಾಂತಿಯುತ ಪ್ರತಿಭಟನೆ ವೇಳೆ ಕೆಲ ಅಪರಿಚಿತ ವ್ಯಕ್ತಿಗಳು ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಬಲಪ್ರಯೋಗ ಮಾಡಿದ ಬಳಿಕ ಘರ್ಷಣೆ ತೀವ್ರಗೊಂಡಿದ್ದು, ಈ ವೇಳೆ ಎಸ್’ಎಚ್’ಓ ಸಂತೋಷ್ ಯಾದವ್ ಅವರು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಥುರಾ ಎಸ್ ಪಿ ಮುಕುಲ್ ದ್ವಿವೇದಿ ಚಿಕಿತ್ಸೆ ಫಲಿಸದೇ ಅಸು ನೀಗಿದ್ದಾರೆ.
ಏನಿದು ಘಟನೆ?
ಸ್ವಾಧೀನ್ ಭಾರತ್ ಆಂದೋಲನ್ ಎಂಬ ಸಂಸ್ಥೆಯ ಕಾರ್ಯಕರ್ತರು ಧರಣಿಯ ನೆಪದಲ್ಲಿ ಎರಡು ವರ್ಷಗಳಿಂದ ಜವಾಹರ್ ಬಾಘ್ ಪ್ರದೇಶವನ್ನು ವಶದಲ್ಲಿಟ್ಟುಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸುವಂತೆ ಜಿಲ್ಲಾಡಳಿತ ಪೊಲೀಸರಿಗೆ ಆದೇಶ ನೀಡಿತ್ತು. ಹೀಗಾಗಿ ನಿನ್ನೆ ಪೊಲೀಸರು ತೆರವಿಗೆ ಮುಂದಾದಗ ಉದ್ರಿಕ್ತ ಗುಂಪು ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪೊಲೀಸರನ್ನು ಕೊಂದು ಹಾಕಿದ್ದಾರೆ.
ತನಿಖೆ ಆದೇಶಿಸಿದ ಸಿಎಂ ಅಖಿಲೇಶ್ ಯಾದವ್
ಇನ್ನು ಅತ್ತ ಮಥುರಾ ಘಟನೇ ದೇಶವ್ಯಾಪಿ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ಮೃತ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ 20 ಲಕ್ಷ ರುಪಾಯಿ ಪರಿಹಾರವನ್ನು ಕೂಡ ಘೋಷಿಸಿದ್ದಾರೆ.
Comments are closed.