ನವದೆಹಲಿ: ಪಾತಕಿ ದಾವೂದ್ ಇಬ್ರಾಹಿಂ ಭಾರತದಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ನಿಗ್ರಹಿಸಲು ಸರ್ಕಾರ ನಡೆಸುತ್ತಿರುವ ಯತ್ನಗಳಿಗೆ ಪೂರಕವಾಗಿ ರಾಷ್ಟ್ರೀಯ ತನಿಕಾ ಸಂಸ್ಥೆಯು ದಾವೂದ್ ಕಂಪೆನಿಯ ಬಂಟ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಝುಹೀದ್ ಮಿಯಾನ್ ಯಾನೆ ಜಾವೊನನ್ನು ಸೆರೆ ಹಿಡಿಯಲು ಯತ್ನ ನಡೆಸಿದ್ದು ದಕ್ಷಿಣ ಆಫ್ರಿಕದ ಅಧಿಕಾರಿಗಳ ಬಳಿ ಆತನ ಬಗ್ಗೆ ವಿವರಗಳನ್ನು ಕೇಳಿದೆ.
ಬಿಜೆಪಿ, ಆರ್ಎಸ್ಎಸ್, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸದಸ್ಯರ ಹತ್ಯೆಗೆ ಸಂಚು ಹೆಣೆಯುವಲ್ಲಿ ಜಾವೋ ಪ್ರಮುಖ ಪಾತ್ರ ವಹಿಸಿದ್ದ. ಜಾವೋನನ್ನು ಹಸ್ತಾಂತರ ಮಾಡುವಂತೆ ಮನವಿ ಪತ್ರವೊಂದನ್ನೂ ತನಿಖಾ ಸಂಸ್ಥೆ ಸಿದ್ಧ ಪಡಿಸಿ ದಕ್ಷಿಣ ಆಫ್ರಿಕ ಅಧಿಕಾರಿಗಳಿಗೆ ರವಾನಿಸಿದೆ. ನಂ.23, ಮಲನ್ ರಸ್ತೆ, ಕೋರ್ಸ್ಟೆನ್, ಡರ್ಬಾನ್ ರಸ್ತೆ, ಪೋರ್ಟ್ ಎಲಿಜಬೆತ್, ಪೂರ್ವ ಕೇಪ್ ವಿಳಾಸದಲ್ಲಿ ಜಾವೋ ವಾಸವಾಗಿದ್ದಾನೆ ಎಂದೂ ಆಫ್ರಿಕದ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಪಾಕಿಸ್ತಾನ ಮೂಲದ ಜಾವೇದ್ ಚಿಕ್ನಾ ಜೊತೆಗೆ ಕೆಲಸ ಮಾಡುವ ಜಾವೋ ದಕ್ಷಿಣ ಆಫ್ರಿಕಾದ ಪೌರತ್ವವನ್ನು ಪಡೆದುಕೊಂಡಿದ್ದು, ದಕ್ಷಿಣ ಆಫ್ರಿಕಾದಲ್ಲಿ ದಾವೂದ್ನ ಅಕ್ರಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ. ಹೀಗಾಗಿ ಆತನನ್ನು ಹಸ್ತಾಂತರ ಮಾಡುವಂತೆ ಕೋರುವುದು ಮಾತ್ರವೇ ಉಳಿದಿರುವ ದಾರಿ ಎಂದು ಅಧಿಕಾರಿಗಳು ಹೇಳುತ್ತಾರೆ. 2002ರ ಗುಜರಾತ್ ಗಲಭೆಗಳ ಕಾಲದಲ್ಲಿ ಸಕ್ರಿಯರಾಗಿದ್ದರೆಂದು ತಾನು ಶಂಕಿಸಿದ ಹಿಂದೂ ನಾಯಕರ ಹತ್ಯೆಗೆ ಜಾವೋ ಮತ್ತು ಚಿಕ್ನಾ ಸಂಚು ರೂಪಿಸಿದ್ದರು ಎಂದು ಎನ್ಐಎ ಹೇಳಿದೆ.
Comments are closed.