ನವದೆಹಲಿ (ಪಿಟಿಐ): ಕನ್ಹಯ್ಯಾ ಕುಮಾರ್ ಬೆನ್ನಲ್ಲೆ ಜೆಎನ್ಯು ವಿದ್ಯಾರ್ಥಿ ಉಮರ್ ಖಾಲೀದ್ ಅವರು ಅನಾರೋಗ್ಯ ನಿಮಿತ್ತ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿದಿದ್ದಾರೆ.
ಉಮರ್ ಅವರ ದೇಹದಲ್ಲಿ ಸಕ್ಕರೆ, ಸೋಡಿಯಂ ಹಾಗೂ ಪೋಟ್ಯಾಷಿಯಂ ಮಟ್ಟ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ನಸುಕಿನಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರಶನದಿಂದ ಹಿಂದೆ ಸರಿದ ಏಳನೇ ವಿದ್ಯಾರ್ಥಿ ಉಮರ್. ಕನ್ಹಯ್ಯಾ ಅನಾರೋಗ್ಯದಿಂದ ನಿರಶನದಿಂದ ಸರಿದಿದ್ದರು. ಅದಕ್ಕೂ ಮೊದಲು ಎಬಿವಿಪಿಯ ಐವರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ನೀಡಿದ್ದ ಭರವಸೆಯಿಂದಾಗಿ ಹಿಂದೆ ಸರಿದಿದ್ದರು.
ನಿಲ್ಲದ ನಿರಶನ: ಮತ್ತೊಂದೆಡೆ, ವಿವಿ ನಿರ್ಧಾರದ ವಿರುದ್ಧದ ನಿರಶನ ಸೋಮವಾರ 12ನೇ ದಿನಕ್ಕೆ ಕಾಲಿಟ್ಟಿದ್ದು, ಶಿಕ್ಷೆಗೆ ಒಳಗಾಗಿರುವ ಇನ್ನೂ 13 ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
ಜೆಎನ್ಯು ಬೋಧಕರ ಅಸೋಸಿಯೇಷನ್(ಜೆಎನ್ಯುಟಿಎ), ಜೆಎನ್ಯುವಿನಲ್ಲಿ ಓದಿದವರು ಸೇರಿದಂತೆ ಹಲವರು ಸತ್ಯಾಗ್ರಹ ನಿರತರಿಗೆ ಬೆಂಬಲ ಸೂಚಿಸಿದ್ದಾರೆ.
ಏನಿದು ಘಟನೆ?: ಫೆಬ್ರುವರಿ 9ರ ಘಟನೆ ಸಂಬಂಧ ಜೆಎನ್ಯು ವಿವಿಯು ಕನ್ಹಯ್ಯಾ, ಉಮರ್ ಸೇರಿದಂತೆ ಹಲವು ಹಾಲಿ ಹಾಗೂ ಕೆಲ ಮಾಜಿ ವಿದ್ಯಾರ್ಥಿಗಳ ಶಿಕ್ಷೆ ವಿಧಿಸಿತ್ತು.
ರಾಷ್ಟ್ರೀಯ