ರಾಂಚಿ: ಶುಕ್ರವಾರ ಇಬ್ಬರು ಮುಸ್ಲಿಮರು 8 ಕೋಣಗಳನ್ನು ಮಾರುಕಟ್ಟೆಗೆ ಕರೆದೊಯ್ಯುತ್ತಿದ್ದಾಗ ಗುಂಪೊಂದು ಆ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಹತ್ಯೆಗೈದ ಘಟನೆ ಜಾರ್ಖಂಡ್ ನಿಂದ ವರದಿಯಾಗಿದೆ.
ಲಟೇಹಾರ್ ಜಿಲ್ಲೆಯಲ್ಲಿನ ಬಲುಮತ್ ಅರಣ್ಯದಲ್ಲಿರುವ ಪ್ರಾಣಿ ರಕ್ಷಣಾ ಸಮಿತಿಯ ಸದಸ್ಯರು ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಜ್ಲೂಮ್ (35) ಮತ್ತು ಅಜಾದ್ ಖಾನ್ ಅಲಿಯಾಸ್ ಇಬ್ರಾಹಿಂ (15) ಎಂಬವರು ಕೋಣ ವ್ಯಾಪಾರಿಗಳಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಈ ಇಬ್ಬರು ವ್ಯಕ್ತಿಗಳು ಮಾರುಕಟ್ಟೆಗೆ ಕೋಣಗಳನ್ನು ಸಾಗಿಸುತ್ತಿದ್ದಾಗ ಜನರ ಗುಂಪು ಇವರ ಮೇಲೆ ದಾಳಿ ನಡೆಸಿದೆ. ಇವರಿಬ್ಬರಿಗೆ ಚೆನ್ನಾಗಿ ಥಳಿಸಿದ ಜನರು ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹತ್ಯೆಗೈದು ಮರಕ್ಕೆ ತೂಗು ಹಾಕಿದ್ದಾರೆ.
ಹತ್ಯೆಗೈಯ್ಯುವ ಮುನ್ನ ಅವರ ಮೇಲೆ ತೀವ್ರವಾಗಿ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಲಟೇಹಾರ್ ಎಸ್ಪಿ ಅನೂಪ್ ಬಿರ್ತಾರಿ ಹೇಳಿದ್ದಾರೆ. ಈ ಕೃತ್ಯದ ಹಿಂದೆ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಜಾರ್ಖಂಡ್ ವಿಕಾಸ್ ಮೋರ್ಚಾ(ಪ್ರಜಾತಾಂತ್ರಿಕ್) ಪಕ್ಷದ ಸ್ಥಳೀಯ ಶಾಸಕ ಪ್ರಕಾಶ್ ರಾಮ್ ಆರೋಪಿಸಿದ್ದಾರೆ.