ನವದೆಹಲಿ: ದೇಶದ್ರೋಹ ಆರೋಪ ಹೊತ್ತಿದ್ದ ಎಂಟು ಜೆಎನ್ ಯು ವಿದ್ಯಾರ್ಥಿಗಳ ಅಮಾನತನ್ನು ಜವಾಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಹಿಂಪಡೆದಿದೆ.
ವಿಡಿಯೋ ಆಧಾರದ ಮೇಲೆ ದೇಶದ್ರೋಹ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಫೆಬ್ರವರಿ 10ರಂದು ಜೆಎನ್ ಯು ವಿಶ್ವವಿದ್ಯಾಲಯದ ಉನ್ನತ ಮಟ್ಟದ ಸಮಿತಿಯು ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬಾನ್ ಭಟ್ಟಾಚಾರ್ಯ, ಅಶುತೋಷ್, ರಾಮನಾಗ, ಅನಂತ್ ಕುಮಾರ್, ಶ್ವೇತಾ ರಾಜ್ ಮತ್ತು ಐಶ್ವರ್ಯ ಅಧಿಕಾರಿ ಎಂಬುವವರನ್ನು ಅಮಾನತುಗೊಳಿಸಿತ್ತು.
ಆರೋಪ ಕುರಿತು ತನಿಖೆ ಮುಗಿಯುವವರೆಗೂ ಅಮಾನತು ಹಿಂಪಡೆಯುವುದಿಲ್ಲ ಎಂದು ಹೇಳಿತ್ತು. ಇದೀಗ ತನಿಖೆ ಪೂರ್ಣಗೊಂಡಿದ್ದು, ಆರೋಪವು ಸಾಬೀತಾಗದ ಹಿನ್ನಲೆಯಲ್ಲಿ ಸಮಿತಿಯು ಅಮಾನತು ಆದೇಶವನ್ನು ಹಿಂಪಡೆದುಕೊಂಡಿದೆ. ಈ ಎಂಟು ವಿದ್ಯಾರ್ಥಿಗಳು ಇನ್ನು ಮುಂದೆ ತರಗತಿಗೆ ಹಾಜರಾಗಬಹುದಾಗಿದ್ದು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಸಮಿತಿ ತಿಳಿಸಿದೆ.
ಉಗ್ರ ಅಫ್ಜಲ್ ನನ್ನು ಗಲ್ಲಿಗೇರಿಸಿದ ದಿನವಾದ ಫೆ.9ರಂದು ಕೆಲ ಜೆಎನ್ ಯು ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿ ಖಾಸಗಿ ಕಾರ್ಯಕ್ರಮ ಏರ್ಪಡಿಸಿ, ಗಲ್ಲು ಶಿಕ್ಷೆಯನ್ನು ಖಂಡಿಸಿ, ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಈ ಹಿನ್ನಲೆಯಲ್ಲಿ ಎಂಟು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು.