ಶ್ರೀನಗರ, ಮಾ.4-ಭಾರತದೊಳಕ್ಕೆ ನುಸುಳಲು ಪಾಕಿಸ್ತಾನದ ಉಗ್ರರು ಈಗ ಹೊಸ ಮಾರ್ಗ ಕಂಡುಕೊಂಡಿದ್ದು, ಜಮ್ಮು-ಕಾಶ್ಮೀರದ ಆರ್ಎಸ್ಪುರ ಸೆಕ್ಟರ್ನಲ್ಲಿ ಗಡಿಯಾಚೆಯಿಂದ ಭಾರತದ ಗಡಿಯೊಳಕ್ಕೆ ಸುರಂಗ ಮಾರ್ಗವೊಂದನ್ನು ಕೊರೆದಿರುವುದನ್ನು ಗಡಿಭದ್ರತಾ ಪಡೆ(ಬಿಎಸ್ಎಫ್) ಯೋಧರು ಪತ್ತೆಹಚ್ಚುವ ಮೂಲಕ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.
ಗುರುವಾರ ಗಡಿಯಲ್ಲಿ ಮಾಮೂಲಿನಂತೆ ಪಹರೆ ನಡೆಸುತ್ತಿದ್ದ ಯೋಧರಿಗೆ ನೆಲದಡಿ ಟೊಳ್ಳಾಗಿರುವಂತೆ ಭಾಸವಾಗಿದೆ. ಅನುಮಾನಗೊಂಡ ಯೋಧರು ತೀವ್ರ ಪರಿಶೀಲನೆ ನಡೆಸಿದಾಗ ಗಡಿಯಾಚೆಯಿಂದ ಭಾರತದೊಳಕ್ಕೆ ಪಾಕಿಸ್ತಾನ ಉಗ್ರರು ಭಾರೀ ಸುರಂಗ ಮಾರ್ಗ ಕೊರೆದಿರುವುದು ಪತ್ತೆಯಾಗಿದೆ.
ಸುರಂಗವು 30 ಮೀಟರ್ ಉದ್ದ ಗಡಿಯೊಳಕ್ಕೆ ಬಂದಿದ್ದು, ಮೂರು ಮೀಟರ್ ಅಗಲವಿದೆ. ಇದನ್ನು ಕಂಡ ಬಿಎಸ್ಎಫ್ ಸಿಬ್ಬಂದಿಯೇ ಬೇಸ್ತು ಬಿದ್ದಿದ್ದಾರೆ. ಇದು ಪತ್ತೆಯಾದ ತಕ್ಷಣ ಪಹರೆ ಯೋಧರು ಮೇಲಧಿಕಾರಿಗಳಿಗೆ ತಿಳಿಸಿದ್ದು, ಹೆಚ್ಚಿನ ಪರಿಶೀಲನೆ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.