ಭೂಪಾಲ್: ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ಮೊದಲು ಕಾಂಗ್ರೆಸ್ ಸೇರಲು ಬಯಸಿದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಳೆದ ವಾರ ಸಂಸತ್ತಿನಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ಮೃತಿ ಇರಾನಿ ಅವರನ್ನು ಟಾರ್ಗೆಟ್ ಮಾಡಿರುವ ದಿಗ್ವಿಜಯ್ ಸಿಂಗ್ , ಸ್ಮೃತಿ ಇರಾನಿ ಬಿಜೆಪಿ ಸೇರುವ ಮುನ್ನ ಕಾಂಗ್ರೆಸ್ ಸದಸ್ಯತ್ವ ನೀಡುವಂತೆ ಕೇಳಿದ್ದರು, ಈ ಸಂಬಂಧ ಅವರು ಹಲವು ಎಐಸಿಸಿ ನಾಯಕರ ಜೊತೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ.
ಗುಜರಾತ್ ದೊಂಬಿ ಪ್ರಕರಣ ಸಂಬಂಧ ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನ ನಡೆಸಿದ್ದ ಸ್ಮತಿ ಇರಾನಿ ಇಂದು ಮೋದಿ ಆರಾಧಕಿರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಗೋದ್ರಾ ಹತ್ಯಾಕಾಂಡ ಸಂಬಂಧ ನರೇಂದ್ರ ಮೋದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಡಿಸೆಂಬರ್ 25 2002 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಇರಾನಿ, ಇಂದು ನಮಗೆ ದೇಶಭಕ್ತಿ ಹಾಗೂ ಧರ್ಮದ ಬಗ್ಗೆ ಪಾಠ ಹೇಳುತ್ತಿರುವುದು ನನಗೆ ಆಶ್ಚರ್ಯ ಮೂಡಿಸಿದೆ ಎಂದು ಟೀಕಿಸಿದ್ದಾರೆ.