ನವದೆಹಲಿ: ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್ ನಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಪ್ರತಿ ಪಕ್ಷಗಳಿಗೆ ನೀಡಿದ ತಿರುಗೇಟಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.ತಮ್ಮ ಟ್ವೀಟರ್ ನಲ್ಲಿ ಭಾರತದ ಲಾಂಛನವಾಗಿರುವ ಸತ್ಯಮೇವ ಜಯತೇ ಎಂದು ಬರೆದಿದ್ದಾರೆ. ಎರಡು ಪ್ರಕರಣಗಳ ಬಗ್ಗೆ ಸ್ಮೃತಿ ಇರಾನಿ ನೀಡಿರುವ ವಿಡಿಯೋವನ್ನು ನರೇಂದ್ರ ಮೋದಿ ತಮ್ಮ ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಬಿಎಸ್ಪಿ ನಾಯಕಿ ಹಾಗೂ ಉ.ಪ್ರದೇಶದ ಮಾಜಿ ಸಿಎಂ ಮಾಯಾವತಿ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿ ಸರಕಾರದ ವಿರುದ್ಧ ಹರಿಹಾಯ್ದರು. ಮೃತ ಮಗುವನ್ನು (ರೋಹಿತ್ ವೇಮುಲ) ನೀವು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದೀರಿ ಎಂದು ಇರಾನಿ ಅವರು ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಗುಡುಗಿದದ್ದರು. ನಮ್ಮ ಸ್ಪಷ್ಟನೆಯನ್ನು ತಾಳ್ಮೆಯಿಂದ ಕೇಳಿ. ಆದಾಗ್ಯೂ ನಿಮಗೆ ಅದು ತೃಪ್ತಿ ತರದಿದ್ದರೆ, ನನ್ನ ರುಂಡವನ್ನೇ ಕತ್ತರಿಸಿಕೊಂಡು ನಿಮ್ಮ ಪಾದಾರವಿಂದಕ್ಕೆ ಇಡಲು ಸಿದ್ಧಳಿದ್ದೇನೆ,” ಎಂದು ಗದ್ಗಿತರಾಗಿ ಹೇಳಿದರು.
ದೇಶದೆಲ್ಲೆಡೆ ವಿದ್ಯಾರ್ಥಿಗಳನ್ನು ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುತ್ತಿರುವವರು ಯಾರು? ಎಂದು ಪ್ರಶ್ನಿಸಿದ ಸ್ಮೃತಿ ಇರಾನಿ ”ಈಗ ವಿವಿಗಳಲ್ಲಿರುವ ಬಹುತೇಕ ಕುಲಪತಿಗಳು ಯುಪಿಎ ಅಧಿಕಾರವಧಿಯಲ್ಲಿ ನೇಮಕವಾದವರು. ಹಾಗಾಗಿ ವಿವಿಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂಬುದೆಲ್ಲಾ ಶುದ್ಧ ಸುಳ್ಳು. ಒಬ್ಬ ವಿಸಿ ಕೇಸರೀಕರಣ ನಡೆಯುತ್ತಿದೆ ಎಂದು ನನ್ನ ವಿರುದ್ಧ ಬೊಟ್ಟು ಮಾಡಿದರೆ ರಾಜಕೀಯ ತೊರೆಯುವೆ,” ಎಂದರು. ”ನನ್ನ ಹೆಸರು ಸ್ಮೃತಿ ಇರಾನಿ, ತಾಕತ್ತಿದ್ದರೆ ನನ್ನ ಜಾತಿ ಹೇಳಿ,” ಎಂದೂ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದರು.