ಪಟನಾ: ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿಯ ಸಮ-ಬೆಸ ದಾಖಲಾತಿ ಸಂಖ್ಯೆಯ ವಾಹನ ಓಡಾಟ ವ್ಯವಸ್ಥೆಗೆ ಸಿದ್ಧತೆ ನಡೆಯುತ್ತಿದ್ದಂತೆಯೇ, ಬಿಹಾರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಅವರಿಗೆ ’ಕುದುರೆ ಸವಾರಿ’ಯ ಐಡಿಯಾ ಬಂದಿದೆ.
ಜೀನ್ಸ್ ಧರಿಸಿ ಪುಲ್ ಓವರ್ ಹಾಕಿಕೊಂಡು ಪಟನಾದ ಬೀದಿಗಳಲ್ಲಿ ಶನಿವಾರ ಖುದ್ದು ‘ಕುದುರೆ ಸವಾರಿ’ ಮಾಡಿದ ತೇಜ್ ಪ್ರತಾಪ್ ‘ವಾಹನಗಳ ಬದಲಿಗೆ ಕುದುರೆ ಸವಾರಿ ಮಾಡಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಿಸಿ’ ಎಂದು ಜನತೆಗೆ ಕರೆ ನೀಡಿದರು. ತೇಜ್ ಪ್ರತಾಪ್ ಕುದುರೆ ಸವಾರಿ ಮಾಡುತ್ತಾ ಸಾಗಿದಾಗ ಬೆಂಗಾವಲು ಸಿಬ್ಬಂದಿ ನಡೆಯುತ್ತಾ ಇಲ್ಲವೇ ಕುದುರೆಗಳ ಮೇಲೆ ಕುಳಿತು ಅವರನ್ನು ಅನುಸರಿಸಿದರು. ಈ ಮೊದಲು ಜೆಡಿ(ಯು) ಮಾಜಿ ಶಾಸಕ ಅನಂತ್ ಸಿಂಗ್ ಅವರು ಆಗಾಗ ಕುದುರೆ ಸವಾರಿ ಮಾಡುತ್ತಾ ಪಟನಾ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಜನರಿಗೆ ನೆನಪಾಯಿತು.
ಜಗತ್ತಿನಲ್ಲಿ ಹೆಚ್ಚು ಇಂಗಾಲ ಹೊರಸೂಸುವ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗುವ ಲಕ್ಷಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ವಾಯುಮಾಲಿನ್ಯ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ತಪ್ಪಿಸಲು ಪ್ರತಿ ನಾಗರಿಕರು ಕೈ ಜೋಡಿಸಬೇಕು ಎಂದು ತೇಜ್ ಪ್ರತಾಪ್ ಕರೆ ನೀಡಿದರು.