ತಿರುಪತಿ, ಡಿ.21- ಉಪವಾಸ ಕೈಗೊಂಡು ವೈಕುಂಠ ದ್ವಾರ ಪ್ರವೇಶಿಸಿದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯಿಂದ ತಿರುಪತಿಯ ಶ್ರೀ ವೆಂಕಟೇಶ್ವರ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತ್ತು.
ವೈಕುಂಠ ಏಕಾದಶಿ ಅಂಗವಾಗಿ ತಿರುಪತಿಯಲ್ಲಿ ಎಲ್ಲೆಲ್ಲೂ ನೋಡಿದರೂ ಭಕ್ತಸಾಗರವೇ ಕಂಡುಬಂದಿದ್ದು ವಿಶೇಷವಾಗಿತ್ತು. ತಿರುಪತಿಯಲ್ಲಿ ಮಧ್ಯರಾತ್ರಿ ಒಂದು ಗಂಟೆಯಿಂದಲೇ ವೆಂಕಟೇಶ್ವರನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ತಿಮ್ಮಪ್ಪನಿಗೆ ಜೈಕಾರ ಹಾಕುತ್ತಾ ಸಾಗುತ್ತಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಎರಡು ದಿನ ಮುಂಚಿತವಾಗಿಯೇ ತಿರುಪತಿಗೆ ಬಂದು ಇಂದು ಮುಂಜಾನೆಯೇ ಸ್ವರ್ಗದ ಬಾಗಿಲನ್ನು ಪ್ರವೇಶಿಸಿದರು.
ದೇವಾಲಯ ಹೊರ ಭಾಗದ ಸುಮಾರು 3ಕಿ.ಮೀ. ಉದ್ದಕ್ಕೂ ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದು, ತಿಮ್ಮಪ್ಪನ ದರ್ಶನಕ್ಕೆ ಕಾಯುತ್ತಿದ್ದದ್ದು ಕಂಡು ಬಂತು.
ಒಂದೆಡೆ ಪೊಲೀಸರು ಹರಿದು ಬಂದ ಜನಸಾಗರವನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.