ಚೆನ್ನೈ: ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ನಗರ ದ್ವೀಪದಂತಾಗಿದ್ದು, ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಕಳೆದ 1 ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ತತ್ತರಿಸಿದ್ದ ಚೆನ್ನೈನಲ್ಲಿ ಮತ್ತೆ ಮಳೆಯಾಗುತ್ತಿದ್ದು, ನಗರವೆಲ್ಲಾ ಸಂಪೂರ್ಣ ಜಲಮಯವಾಗಿದೆ.
ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಪ್ರಮುಖ ರಸ್ತೆಗಳು, ಸುರಂಗ, ಮನೆಗಳು ಹಾಗೂ ಶಾಲೆಗಳಿಗೆ ನೀರು ನುಗ್ಗಿದ್ದು ಚೆನ್ನೈ ನಗರ ತೇಲುವ ತೆಪ್ಪದಂತಾಗಿದೆ. ವಾಹನ ಸಂಚಾರ, ರೈಲು ಓಡಾಟ, ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಭಾರೀ ಮಳೆಯಿಂದಾಗಿ ಮಧ್ಯ ಕೈಲಾಶ್ ಸಿಗ್ನಲ್ ಬಳಿಯ ರಸ್ತೆಯಲ್ಲೇ ದೊಡ್ಡ ಗುಂಡಿ ಬಿದ್ದಿದೆ. ಇದಷ್ಟೇ ಅಲ್ಲದೆ ಹಲವೆಡೆ ಭೂ ಕುಸಿತ ಕೂಡ ಉಂಟಾಗಿದೆ.
ಇನ್ನೂ ಮಳೆಯಿಂದಾಗಿ ತಮಿಳುನಾಡಿನ ಜಲಾಶಯಗಳೆಲ್ಲ ಭರ್ತಿಯಾಗಿವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಪ್ರವಾಹವುಂಟಾಗುವ ಭೀತಿ ಇದೀಗ ಎಲ್ಲರಲ್ಲೂ ಉಂಟು ಮಾಡಿದೆ. ಭಾರೀ ಮಳೆಗೆ ಈಗಾಗಲೇ 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ ಹಲವು ಶಾಲಾ, ಕಾಲೇಜುಗಳಿಗೆ ಮಂಗಳವಾರದವರೆಗೂ ರಜೆ ಘೋಷಿಸಿದೆ. ಇನ್ನು ಕಳೆದ 12 ಗಂಟೆಗಳಲ್ಲಿ 186 ಮಿ.ಮಿ ನಷ್ಟು ಮಳೆಯಾಗಿದ್ದು, ತಮಿಳುನಾಡಿನ ಇತಿಹಾಸದಲ್ಲೇ ಹೆಚ್ಚು ಎಂದು ಹೇಳಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆ ಕೈಗೊಂಡ ಭಾರತೀಯ ವಾಯುಪಡೆ
ಕುಂಭದ್ರೋಣ ಮಳೆಯಿಂದಾಗಿ ನದಿಯಂತಾಗಿರುವ ತಮಿಳುನಾಡಿನಲ್ಲಿ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಸುಮಾರು 50 ಮಂದಿ ತಂಡ ಪ್ರವಾಹ ಪೀಡಿತ ಗುಡ್ವಾಂಚರಿ, ಮುಡಿಚೂರ್ ನಲ್ಲಿ ಸಿಲುಕಿರುವವರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನು ರಕ್ಷಣೆಗಾಗಿ ವಾಯುಪಡೆಯ ಐಎನ್ಎಸ್ ಐರಾವತ ಯುದ್ಧ ನೌಕೆಯನ್ನು ಬಳಸಿಕೊಳ್ಳಲಾಗುತ್ತಿದೆ.
ತಮಿಳುನಾಡಿಗೆ ನೆರವಿಗೆ ದಾವಿಸಿದ ಕೇಂದ್ರ
ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ತಮಿಳುನಾಡಿಗೆ ಸೂಕ್ತ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.
ಸಂತ್ರಸ್ತರ ನೆರವಿಗಾಗಿ ತಮಿಳುನಾಡಿಗೆ 6 ಚೇತಕ್ ಹೆಲಿಕಾಪ್ಟರ್ ಗಳನ್ನು ಕಳುಹಿಸಲು ಕೇಂದ್ರ ನಿರ್ಧರಿಸಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಉನ್ನತ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಾಳೆ ತಮಿಳುನಾಡಿಗೆ ತೆರಳಲಿರುವ ಚೇತಕ್ ಕಾಪ್ಟರ್ ನಲ್ಲಿ ಆಹಾರ ರವಾನೆ ಮಾಡಲಾಗುತ್ತದೆ.