ಲಖನೌ: ಕಾಶಿ ವಿಶ್ವನಾಥನ ಸನ್ನಿಧಿಯನ್ನು ಪ್ರವೇಶಿಸುವ ವಿದೇಶೀಯ ನಾರಿಯರು ಇನ್ನು ಮುಂದೆ ಸೀರೆಧರಿಸಿಯೇ ಒಳಹೋಗಬೇಕು ಎಂಬ ನಿಯಮ ತರಲಾಗಿದೆ ಎಂದು `ಇಂಡಿಯನ್ ಎಕ್ಸ್ಪ್ರೆಸ್’ ವರದಿಮಾಡಿದೆ. ಆದರೆ ತಾವು ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ, ಸಭ್ಯತೆಯಿಂದ ಬಟ್ಟೆ ಧರಿಸಿಕೊಂಡು ಬರುವಂತೆ ಹೇಳಿದ್ದೇವೆ ಅಷ್ಟೇ ಎಂದು ದೇಗುಲ ಸಮಜಾಯಿಷಿ ನೀಡಿದೆ.
ಮೈತೋರಿಸುವ ಬಟ್ಟೆ ಧರಿಸುವ ದೇಶಿ ಅಥವಾವಿದೇಶಿ ಮಹಿಳೆಯರಿಗೆ ಇನ್ನು ವಿಶ್ವನಾಥನ ದರ್ಶನಕ್ಕೆಪ್ರವೇಶವಿಲ್ಲ. ದೇಗುಲದ ಹೊರಗೆ ಕಿಯೋಸ್ಕ್ಗಳನ್ನು ಕಟ್ಟಲಾಗಿದ್ದು, ಬೇರೆ ದಿರಿಸು ತೊಟ್ಟು ಬಂದವರು ಅಲ್ಲಿ ಸೀರೆಯುಟ್ಟು ಬರಬಹುದಾಗಿದೆ. ಸೀರೆಯುಡಲು ಗೊತ್ತಿಲ್ಲದವರು ಮಹಿಳಾ ಪೋಲೀಸರಿಂದ ಆ ಕುರಿತು ತರಬೇತಿಯನ್ನೂ ಪಡೆಯಬಹುದು. ವಿದೇಶಿ ಯಾತ್ರಿಕರು ತೊಡುವ ದಿರಿಸುಗಳು ತಮಗೆ ಮುಜುಗರ ಉಂಟುಮಾಡುತ್ತಿವೆ ಎಂದು ದಕ್ಷಿಣ ಭಾರತದ ಪ್ರವಾಸಿಗರು ದೂರಿಕೊಂಡಿದ್ದರು.
ತಿರುಪತಿ ದೇವಾಲಯದಲ್ಲಿರುವಂತೆ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಧೋತಿ ಕುರ್ತಾದ ವಸ್ತ್ರಸಂಹಿತೆ ಜಾರಿ ಮಾಡುವಂತೆ ಮನವಿ ಮಾಡಿದ್ದರು ಎಂದು ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ದ್ವಿವೇದಿ ಹೇಳಿದ್ದಾರೆ. ಆದರೆ, ತಾವು ವಸ್ತ್ರಸಂಹಿತೆ ಜಾರಿ ಮಾಡಿಲ್ಲ, ಸಭ್ಯವಾಗಿ ಬಟ್ಟೆ ಧರಿಸಿ ಬರುವಂತೆ ಹೇಳಿದ್ದೇವೆ ಎಂದು ಕಾಶಿ ವಿಶ್ವನಾಥ ಮಂದಿರ ನ್ಯಾಸ ಪರಿಷತ್ನ ಅಧ್ಯಕ್ಷ ಅಶೋಕ್ ದ್ವಿವೇದಿ
ಹೇಳಿದ್ದಾರೆ.