ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ನವೆಂಬರ್ 20 ರಂದು ನಡೆಯಲಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಮಾರಂಭಕ್ಕೆ ಹಾಜರಾಗುವ ಬಯಕೆಯಿದ್ದರೂ ಅನಾರೋಗ್ಯವನ್ನು ಎದುರಿಸುತ್ತಿರುವುದರಿಂದ ಚೆನ್ನೈನಿಂದ ಬರಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಕ್ಷಮಿಸಿ. ನಿಮಗೆ, ನಿಮ್ಮ ಸಚಿವ ಸಂಪುಟಕ್ಕೆ ಒಳ್ಳೆಯದಾಗಲಿ ಎಂದು ಕರುಣಾನಿಧಿ, ಬಿಹಾರ್ ಸಿಎಂ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವಂತೆ ಬಿಹಾರ್ ಸಿಎಂ ನಿತೀಶ್ ಕುಮಾರ್, ಕರುಣಾನಿಧಿಯವರಿಗೆ ಆಹ್ವಾನ ನೀಡಿದ್ದರು.
ಪತ್ನಿ ದಯಾಲು ಅಮ್ಮಾಳ್ ಕೂಡಾ ಅನಾರೋಗ್ಯದಿಂದಾಗಿ ಅಪೋಲೋ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿರುವುದರಿಂದ, ನನ್ನ ಪರವಾಗಿ ಪುತ್ರ ಸ್ಟಾಲಿನ್ ಅವರನ್ನು ಕಳುಹಿಸುತ್ತಿರುವುದಾಗಿ ಕರುಣಾನಿಧಿ ತಿಳಿಸಿದ್ದಾರೆ.
ಇದೊಂದು ಐತಿಹಾಸಿಕ ಪ್ರಮಾಣವಚನ ಸ್ವೀಕಾರ ಸಮಾರಂಭವಾಗಿದ್ದು ನಿತೀಶ್ ಕುಮಾರ್, ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಕೂಟ ರಚಿಸಿ, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ತಕ್ಕ ಪಾಠ ಕಲಿಸಿದೆ ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಸಂತಸ ವ್ಯಕ್ತಪಡಿಸಿದ್ದಾರೆ.