ಢಾಕಾ: ನಕಲಿ ಪಾಸ್ ಪೋರ್ಟ್ ಬಳಸಿ ದೇಶವನ್ನು ಪ್ರವೇಶಿಸಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಅಸ್ಸಾಂನ ಬಂಡುಕೋರ ಉಲ್ಫಾ ಸಂಘಟನೆಯ ಮುಖ್ಯಸ್ಥನನ್ನು ಭಾರತಕ್ಕೆ ಹಸ್ತಾಂತರಿಸಲು ಬಾಂಗ್ಲಾದೇಶ ಸಮ್ಮತಿ ಸೂಚಿಸಿದೆ.
ಅನೂಪ್ ಚೇತಿಯಾ ವಿರುದ್ಧ ಅಸ್ಸಾಂನಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಕಳೆದ 17 ವರ್ಷಗಳಿಂದ ಭಾರತಕ್ಕೆ ಅನೂಪ್ ಚೇತಿಯಾ ಬೇಕಾಗಿದ್ದ. ಹೀಗಾಗಿ ಅನೂಪ್ ಚೇತಿಯಾ ಹಸ್ತಾಂತರಕ್ಕೆ ಭಾರತ ಸರ್ಕಾರ ಬಾಂಗ್ಲಾದೇಶಕ್ಕೆ ಮನವಿ ಮಾಡಿತ್ತು.
ಈ ಸಂಬಂಧ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಬಾಂಗ್ಲಾದೇಶ ಅಧಿಕಾರಿಗಳೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದರು. ಈ ಮಧ್ಯೆ ಪ್ರಧಾನಿ ಮೋದಿ ಅವರ ಮಧ್ಯಪ್ರವೇಶದಿಂದಾಗಿ ಚೇತಿಯಾನನ್ನು ಭಾರತಕ್ಕೆ ಹಸ್ತಾಂತರಿಸಲು ಬಾಂಗ್ಲಾ ಸಮ್ಮತಿಸಿತ್ತು. ಢಾಕಾದಲ್ಲಿ ಸಿಬಿಐ ತಂಡ ಅನೂಪ್ ಚೇತಿಯಾನನ್ನು ವಶಕ್ಕೆ ಪಡೆದಿದ್ದು, ಇಂದು ದೆಹಲಿಗೆ ಕರೆತರೋ ಸಾಧ್ಯತೆ ಇದೆ.