ಖಟ್ಮಂಡು: ನೇಪಾಳಿ ಸಚಿವ ಸತ್ಯ ನಾರಾಯಣ್ ಮಂಡಲ್ ಅವರು ಒಂದು ದಿನದ ಹಿಂದೆ ಭಾರತದ ವಿರುದ್ಧ ನೀಡಿದ ಹೇಳಿಕೆಗಳಿಗೆ ಭಾರತೀಯ ರಾಯಭಾರಿ ಕಚೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸೋಮವಾರ ಬೀರತ್ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದ ಮಂಡಲ್, ನೇಪಾಳಕ್ಕೆ ಭಾರತದ ಸೈನಿಕರನ್ನು ನಾಗರಿಕ ಬಟ್ಟೆಯಲ್ಲಿ ಕಳುಹಿಸುತ್ತಿದೆ ಎಂದು ದೂರಿದ್ದರು. “ಭಾರತ ತನ್ನ ಸೇನೆಯನ್ನು ಸಮವಸ್ತ್ರದಲ್ಲಿ ಕಳುಹಿಸಲು ಸಾಧ್ಯವಿಲ್ಲ ಆದುದರಿಂದ ನಾಗರಿಕ ಬಟ್ಟೆಗಳನ್ನು ಹಾಕಿ ನೇಪಾಳಕ್ಕೆ ಕಳುಹಿಸುತ್ತದೆ” ಎಂದಿದ್ದರು.
ಮಂಗಳವಾರ ಭಾರತೀಯ ರಾಯಭಾರ ಕಚೇರಿ ಇದಕ್ಕೆ ಪ್ರತಿಕ್ರಿಯಿಸಿದ್ದು ಈ ಹೇಳಿಕೆ ಪ್ರಚೋದನಕಾರಿ, ಅರ್ಥವಿಲ್ಲದ್ದು ಮತ್ತು ಕೆಟ್ಟ ಮನಸ್ಥಿತಿಯದ್ದು ಎಂದಿದೆ.
“ನೇಪಾಳ ಸರ್ಕಾರದಲ್ಲಿ ಸಚಿವ ಹುದ್ದೆಯನ್ನು ಹೊಂದಿರುವ ಜವಾಬ್ದಾರಿಯುತರೊಬ್ಬರಿಂದ ಈ ಹೇಳಿಕೆ ಬಂದಿರುವುದು ಭಾರತ ಮತ್ತು ನೇಪಾಳದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ” ಎಂದು ರಾಯಭಾರ ಕಚೇರಿ ತಿಳಿಸಿದೆ.
“ಭಾರತ ನೇಪಾಳದ ಜನರಿಗೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಬಯಸುತ್ತದೆ. ಈ ಗುರಿಗಳನ್ನು ಮುಟ್ಟಲು ನೇಪಾಳಕ್ಕೆ ಮತ್ತು ನೇಪಾಳ ಜನರಿಗೆ ಬೆಂಬಲಿಸಿದ್ದೇವೆ” ಎಂದು ಹೇಳಿಕೆ ತಿಳಿಸಿದೆ.