ಹೈದ್ರಾಬಾದ್: ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಮಾಜಿ ಪ್ರಧಾನಿ ದಿವಗತ ಜವಾಹರಲಾಲ್ ನೆಹರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಥಮ ಪ್ರಧಾನಿ ನೆಹರು ಅರುಣಾಚಲಪ್ರದೇಶ, ಲಡಾಖ್ ನನ್ನ ಹೃದಯಕ್ಕೆ ಹತ್ತಿರವೆನಿಸುವುದಿಲ್ಲ ಎಂದು ಹೇಳಿದ್ದರು, ಈ ಕುರಿತು ಈಗಲೂ ಜನರ ಮನಸ್ಸಿನಲ್ಲಿ ದುಃಖವಿದೆ ಎಂದು ರಿಜಿಜು ಹೇಳಿದ್ದಾರೆ.
1962ರಲ್ಲಿ ಚೀನಾ ಆಸ್ಸಾಂದ ಭಾಗವಾಗಿದ್ದ ಅರುಣಾಚಲಪ್ರದೇಶದ ಪಶ್ಚಿಮ ಭಾಗವನ್ನು ಆಕ್ರಮಿಸಿಕೊಂಡ ನಂತರ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ನೆಹರು, ಚೀನಾ ಆಕ್ರಮಿಸಿಕೊಂಡ ಲಡಾಖ್ ಮತ್ತು ಅರುಣಾಚಲ ಭೂಭೂಗ ಬಂಜರು ಭೂಮಿ ಮತ್ತು ಪರ್ವತ. ಹುಲ್ಲು ಕೂಡ ಬೆಳೆಯದ ಈ ಪ್ರದೇಶಗಳನ್ನು ಕಳೆದುಕೊಂಡಿದ್ದನ್ನೇ ಚರ್ಚಿಸುತ್ತ ಸಂಸತ್ತಿನ ಅಮೂಲ್ಯ ಸಮಯವನ್ನು ಏಕೆ ವ್ಯರ್ಥ ಮಾಡುವುದು ಎಂದು ಕೇಳಿದ್ದರು. ಅಷ್ಟೇ ಅಲ್ಲದೆ ಆಲ್ ಇಂಡಿಯಾ ರೇಡಿಯೋದಲ್ಲಿ ಮಾತನಾಡುತ್ತ ಅರುಣಾಚಲಪ್ರದೇಶ, ಲಡಾಖ್ ನನ್ನ ಹೃದಯಕ್ಕೆ ಹತ್ತಿರವೆನಿಸುವುದಿಲ್ಲ ಎಂದು ಹೇಳಿದ್ದರು. ನೆಹರುರವರ ಈ ಮಾತುಗಳನ್ನು ಈ ಭಾಗದ ಜನರು ಎಂದಿಗೂ ಮರೆಯುವುದಿಲ್ಲ. ನಮ್ಮ ಹೃದಯಕ್ಕೆ ಈಗಲೂ ಇದು ನೋವುಂಟು ಮಾಡುತ್ತದೆ ಎಂದು ಹೇಳಿದ್ದಾರೆ
ದೇಶದ ಜನ ಇತಿಹಾಸವನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಮುಂದಿನ ಪೀಳಿಗೆ ಸಹ ಇತಿಹಾಸದಲ್ಲಿ ನಡೆದ ವಾಸ್ತವಗಳನ್ನು ಅರಿತುಕೊಳ್ಳಬೇಕಿದೆ ಎಂದು ರಿಜಿಜು ತಿಳಿಸಿದ್ದಾರೆ.