ನವದೆಹಲಿ: ಛೋಟಾ ರಾಜನ್ ಬಂಧನದಿಂದ ಉತ್ಸಕರಾಗದ ಮಾಜಿ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್, ಭೂಗತ ದೊರೆ ದಾವೂದ್ ಇಬ್ರಾಹಿಂ ಬಂಧನ ತುಂಬಾ ಮಹತ್ವದ್ದಾಗಿರಲಿದೆ ಎಂದು ಹೇಳಿದ್ದಾರೆ.
ಛೋಟಾ ರಾಜನ್ ಬಂಧನ ಸ್ವಾಗತಾರ್ಹ. ಆದರೆ, ಐಎಸ್ಐ ಆಶ್ರಯದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತ ದೊರೆ ದಾವೂದ್ ಬಂಧನ ಕೇಂದ್ರ ಸರಕಾರಕ್ಕೆ ಮಹತ್ವದ್ದಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇಂಡೋನೇಷ್ಯಾದ ಬಾಲಿಯಲ್ಲಿ ಛೋಟಾ ರಾಜನ್ ಬಂಧನವಾಗಿರುವುದಕ್ಕೆ ಕೇಂದ್ರ ಸರಕಾರ ಸಂತಸ ವ್ಯಕ್ತಪಡಿಸಿದ್ದು, ರಾಜನ್ ಬಂಧನದಿಂದ ದಾವೂದ್ ಬಗ್ಗೆ ಮತ್ತಷ್ಟು ಸುಳಿವು ದೊರೆಯಲಿವೆ ಎಂದು ಹೇಳಿಕೆ ನೀಡಿದ ನಂತರ ಸಿಂಗ್ ಹೇಳಿಕೆ ಹೊರಬಿದ್ದಿದೆ.
ತಮ್ಮ ಹೇಳಿಕೆಗಳಿಗೆ ಬಿಜೆಪಿ ಹೈಕಮಾಂಡ್ ಮಹತ್ವ ನೀಡುತ್ತಿಲ್ಲ. ಬಿಹಾರ್ ವಿಧಾನಸಭೆ ಚುನಾವಣೆಯಲ್ಲೂ ತಮ್ಮ ಸಲಹೆಗಳಿಗೆ ಮಾನ್ಯತೆ ನೀಡದೆ ಪಕ್ಷದಿಂದ ದೂರವಾಡಲಾಗುತ್ತಿದೆ ಎನ್ನುವ ಬೇಸರ ಮಾಜಿ ಐಎಎಸ್ ಅಧಿಕಾರಿ ಸಿಂಗ್ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.
ಬಿಜೆಪಿ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಹೇಳಿಕೆ ನೀಡಿದಾಗಲೂ ಕೂಡಾ ಬಿಜೆಪಿ ಹೈಕಮಾಂಡ್ ಅವರ ಹೇಳಿಕೆಗೆ ಸೊಪ್ಪು ಹಾಕಿರಲಿಲ್ಲ.