ಹೊಸದಿಲ್ಲಿ, ಅ.24: ಬೇಳೆಕಾಳುಗಳ ತೀವ್ರ ಬೆಲೆಏರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ 13 ರಾಜ್ಯಗಳಲ್ಲಿ ಅಕ್ರಮ ದಾಸ್ತಾನುಕೋರರ ವಿರುದ್ಧ ನಡೆದ ದಾಳಿಗಳಲ್ಲಿ 75 ಸಾವಿರ ಟನ್ನಷ್ಟು ಧಾನ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ಬೇಳೆಕಾಳುಗಳ ಲಭ್ಯತೆಗಾಗಿ ಬೇಳೆಕಾಳುಗಳ ಮಿಲ್ ಮಾಲಕರು, ರಖಂ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸುವಂತೆ ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.
ಈ ಮಧ್ಯೆ, ಬೇಳೆಕಾಳುಗಳ ಅಕ್ರಮ ದಾಸ್ತಾನು ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ. ಈವರೆಗೆ ಒಟ್ಟು 6,077 ಸಲ ದಾಳಿ ನಡೆದಿವೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಮಳೆ ಮತ್ತು ಬೆಳೆ ಕೊರತೆಯ ಹಿನ್ನೆಲೆಯಲ್ಲಿ 2014-15ನೆ ಸಾಲಿನಲ್ಲಿ 2 ದಶಲಕ್ಷ ಟನ್ನಷ್ಟು ಬೇಳೆಕಾಳುಗಳ ಆಂತರಿಕ ಕೊರತೆ ಉಂಟಾಗಿದೆ. ಇದರಿಂದ ಬೇಳೆಗಳ ಮಾರಾಟ ಬೆಲೆಯಲ್ಲಿ ತೀವ್ರ ಏರಿಕೆ ಉಂಟಾಗಿತ್ತು. ಒಂದು ಹಂತದಲ್ಲಿ ತೊಗರಿ ಬೇಳೆ ಬೆಲೆ ಕೆಜಿಗೆ 210 ರೂಪಾಯಿಗೆ ಏರಿಕೆಯಾಗಿತ್ತು. ಅಕ್ರಮ ದಾಸ್ತಾನುಕೋರರ ವಿರುದ್ಧ ದಾಳಿ ಹಿನ್ನೆಲೆಯಲ್ಲಿ ಬೇಳೆಕಾಳುಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ತುಸು ಇಳಿಕೆ ಕಂಡುಬಂದಿದೆ.