ನವದೆಹಲಿ: ತೊಗರಿ ಬೇಳೆ ಸೇರಿದಂತೆ ಅಗತ್ಯ ವಸ್ತುಗಳ ದರಗಳು ಗಗನಕ್ಕೇರುತ್ತಿದ್ದು, ದರ ಏರಿಕೆಗೆ ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ದೇಶಕ್ಕೆ 50 ಲಕ್ಷ ಟನ್ ತೊಗರೆ ಬೇಳೆ ಅಗತ್ಯವಾಗಿದ್ದರೆ, ಕೇಂದ್ರ ಸರಕಾರ ಕೇವಲ 6 ಲಕ್ಷ ಟನ್ ತೊಗರಿ ಬೇಳೆಯನ್ನು ಅಮದು ಮಾಡಿಕೊಂಡಿದೆ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಪಕ್ಷದ ವಕ್ತಾರ ಆನಂದ್ ಶರ್ಮಾ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ದೇಶಕ್ಕೆ ತೊಗರಿ ಬೇಳೆ ಬೇಡಿಕೆ ಮತ್ತು ಪೂರೈಕೆಗೆ ಅಗತ್ಯವಾಗಿದ್ದಕ್ಕಿಂತ 40 ರಿಂದ 50 ಲಕ್ಷ ಟನ್ ಕೊರತೆಯಾಗುತ್ತಿತ್ತು. ಕೊರತೆಯಾದಷ್ಟು ತೊಗರಿಬೇಳೆಯನ್ನು ವಿದೇಶಗಳಿಂದ ಅಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಬೇಳೆಕಾಳುಗಳ ಉತ್ಪಾದನೆಯಲ್ಲಿ ಕುಂಠಿತವಾಗಿದೆ. ಆದಾಗ್ಯೂ, ಮೋದಿ ಸರಕಾರ 50 ಲಕ್ಷ ಟನ್ ಬೇಳೆಕಾಳುಗಳನ್ನು ಅಮದು ಮಾಡಿಕೊಳ್ಳುವ ಬದಲಿಗೆ, ಕೇವಲ 6 ಲಕ್ಷ ಟನ್ ಬೇಳೆಕಾಳುಗಳನ್ನು ಅಮದು ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಇದರಿಂದಾಗಿ ಬೇಳೆಕಾಳುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಗುಡುಗಿದ್ದಾರೆ.