ನವದೆಹಲಿ: ಪಕ್ಷದ ಆಂತರಿಕ ರಾಜಕೀಯ ಕಾರಣಗಳಿಂದಾಗಿ ನನ್ನ ಹರಕೆಯ ಕುರಿಯನ್ನಾಗಿ ಮಾಡಲಾಗಿದೆ, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ 2 ಗಂಟೆ ಬಳಿಕ ನನಗೆ ನನ್ನ ಸಚಿವ ಸ್ಥಾನದಿಂದ ವಜಾಗೊಳಿಸಿರುವ ವಿಷಯ ತಿಳಿಯಿತು ಎಂದು ಭ್ರಷ್ಟಾಚಾರದ ಆರೋಪದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದಿಂದ ವಜಾಗೊಳಿಸಲ್ಪಟ್ಟಿರುವ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಅಸೀಂ ಅಹಮದ್ ಖಾನ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಖಾನ್, ಪಕ್ಷದ ಆಂತರಿಕ ರಾಜಕೀಯ ಕಾರಣಗಳಿಂದಾಗಿ ನನ್ನ ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ನನ್ನ ವಿರುದ್ಧದ ಆರೋಪದ ಆಡಿಯೋ ಟೇಪ್ ಸಾಬೀತಾಗಿಲ್ಲ. ಏತನ್ಮಧ್ಯೆ ನನ್ನ ಸಂಪುಟದಿಂದ ವಜಾಗೊಳಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಉಳಿದವರ ಹೆಸರನ್ನೂ ಯಾಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ನನ್ನ ವಿರುದ್ಧದ ಆರೋಪದ ಕುರಿತ ಸಿಡಿ ನೀಡಲು ತಿಳಿಸಿದ್ದೆ. ಆದರೆ ಆಪ್ ಮುಖಂಡರು ಇದುವರೆಗೆ ನೀಡಿಲ್ಲ ಎಂದು ಹೇಳುವ ಮೂಲಕ ದೆಹಲಿಯಲ್ಲಿ ಮತ್ತೆ ರಾಜಕೀಯ ಹೈಡ್ರಾಮಾ ಶುರುವಾದಂತಾಗಿದೆ.