ಹೊಸದಿಲ್ಲಿ, ಅ.2: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್ಆರ್ಎಚ್ಎಂ) ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಹಗರಣದ ಹಿಂದಿನ ಸಂಚನ್ನು ಬಹಿರಂಗಗೊಳಿಸುವ ದಿಸೆಯಲ್ಲಿ ಸೋಮವಾರ ಮಾಯಾವತಿ ಅವರನ್ನು ವಿಚಾರಣೆಗೊಳಪಡಿಸಲಾಯಿತು ಎಂದು ಅಧಿಕೃತ ಮೂಲಗಳು ಹೇಳಿವೆ.ಹಗರಣದಲ್ಲಿ ಮಾಯಾವತಿಯವರ ವಿರುದ್ಧ ಹೊಸ ಸಾಕ್ಷಾಧಾರಗಳು ಲಭಿಸಿವೆ ಎಂದೂ ತನಿಖಾ ಸಂಸ್ಥೆ ಹೇಳಿಕೊಂಡಿದೆ.
ಹಗರಣದ ಸಂಬಂಧವಾಗಿ ಸಿಬಿಐ ಈವರೆಗೆ 74 ಎಫ್ಐಆರ್ ದಾಖಲಿಸಿದೆ. 48 ಆರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಸಂಬಂಧಿಸಿದಂತೆ ತೆಗೆದುಕೊಂಡಿದ್ದ ನಿರ್ಧಾರಗಳ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಮಾಯಾವತಿಯವರು ಸ್ಪಷ್ಟ ಉತ್ತರಗಳನ್ನು ನೀಡಿಲ್ಲ ಎನ್ನಲಾಗಿದೆ.
ಮಾಯಾವತಿಯವರ ಅಧಿಕಾರಾವಧಿಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಇಬ್ಭಾಗ ಮಾಡಲಾಗಿತ್ತು. ಜೊತೆಗೆ ನೂರು ಜಿಲ್ಲಾ ಯೋಜನಾಧಿಕಾರಿಗಳ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಎನ್ಆರ್ಎಚ್ಎಂ ಯೋಜನೆಯಡಿಯಲ್ಲಿ ಈ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದರು ಎಂದು ಮೂಲಗಳು ತಿಳಿಸಿವೆ.