ಬೀಜಿಂಗ್: ಲಡಾಕ್ ಪ್ರಾಂತ್ಯದಲ್ಲಿ ಚೀನಾ ನಿರ್ಮಿಸಿದ್ದ ಗುಡಿಸಲನ್ನು ಭಾರತೀಯ ಪಡೆ ಧ್ವಂಸ ಮಾಡಿದ್ದು, ಚೀನಾದ ರಕ್ಷಣಾ ಸಚಿವಾಲಯ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಚೀನಾ ನಿರ್ಮಿಸಿದ್ದು ಕಾವಲು ಗೋಪುರ ಮಾದರಿಯ ಆಕೃತಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದ್ದರೆ, ಮತ್ತೆ ಕೆಲವು ಮಾಧ್ಯಮಗಳು ಅದನ್ನು ಗುಡಿಸಲು ಎಂದು ಹೇಳಿವೆ. ಚೀನಾದೊಂದಿಗೆ ಗಡಿ ವಿವಾದ ಎದುರಿಸುತ್ತಿರುವ ಭಾರತ ತನ್ನ ಪ್ರದೇಶದಲ್ಲಿ ಚೀನಾ ನಿರ್ಮಿತ ವಸ್ತುವನ್ನು ಧ್ವಂಸಗೊಳಿಸಿರುವುದರ ಬಗ್ಗೆ ಚೀನಾದ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಉಭಯ ರಾಷ್ಟ್ರಗಳ ನಡುವೆ ಗಡಿ ವಿವಾದಕ್ಕೆ ಸಂಬಂಧಿಸಿದ ಒಪ್ಪಂದದಂತೆ ಭಾರತೀಯ ಪಡೆಗಳು ನಡೆದುಕೊಂಡಿಲ್ಲ ಎಂದು ಆರೋಪಿಸಿದೆ.
ಒಪ್ಪಂದದ ಅಂಶಗಳನ್ನು ತಕ್ಷಣವೇ ಪಾಲಿಸಬೇಕೆಂದು ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ಒತ್ತಾಯಿಸಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳದೇ ಇರಲು ಸಲಹೆ ನೀಡಿದ್ದಾರೆ.