ನವದೆಹಲಿ,ಸೆ.7: ನಿವೃತ್ತ ಸೈನಿಕರಿಗೆ “ಒಂದು ರ್ಯಾಂಕ್ ಒಂದು ಪಿಂಚಣಿ”ಯೋಜನೆಯನ್ನು ಜಾರಿಗೆ ತಂದ ನಂತರ ಇದೀಗ ಏರ್ ಇಂಡಿಯಾ ಪೈಲೆಟ್ಗಳು ತಮ್ಮ ವಿವಿಧ ಬೇಡಿಕೆಗಳನ್ನೂ ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.
ಸರ್ಕಾರಿ ಸಾಮ್ಯದ ಏರ್ ಇಂಡಿಯಾ ಅಧ್ಯಕ್ಷ ಅಶ್ವನಿ ಲೋಹಾನಿ ಪೈಲೆಟ್ಗಳ ಜತೆ ಕಳೆದೊಂದು ವಾರದಿಂದ ಅನೇಕ ಸಭೆ ನಡೆಸಿ ನ್ಯಾಯಯುತ ಬೇಡಿಕೆ ಈಡೇರಿಸುವ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ.
ಬೇಡಿಕೆ ಈಡೇರದಿದ್ದರೆ ಮುಷ್ಕರ ನಡೆಸುವುದಾಗಿ ಸರ್ಕಾರಿ ಸಾಮ್ಯದ ಎಲ್ಲಾ ಪೈಲೆಟ್ಗಳು ಬೆದರಿಕೆ ಹಾಕಿದ್ದಾರೆ.ಇದರಿಂದ ಕೇಂದ್ರ ಸರ್ಕಾರ ಒಂದು ಸಮಸ್ಯೆ ಬಗೆಹರಿಸಿಕೊಂಡು ನೆಮ್ಮದಿಯ ನಿಟ್ಟಿಸಿರು ಬಿಡುವ ಮುನ್ನವೇ ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ.
ಭಾರತೀಯ ವಾಣಿಜ್ಯ ಪೈಲೆಟ್ಗಳ ಸಂಘ ಬೇಡಿಕೆ ಈಡೇರಿಸದಿದ್ದರೆ ಯಾವೊಂದು ವಿಮಾನವನ್ನೂ ಹಾರಾಟ ನಡೆಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ ಅಲ್ಲದೆ, ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ರಹಸ್ಯ ಮತದಾನವನ್ನು ಪೈಲೆಟ್ಗಳು ಏರ್ಪಡಿಸಿದ್ದು ವಿದೇಶದಲ್ಲಿರುವ ವಿಮಾನ ಚಾಲಕರು ಮರಳಿ ಭಾರತಕ್ಕೆ ಬಂದ ನಂತರ ಅವರೂ ಮತದಾನದಲ್ಲಿ ಭಾಗಿಯಾಗಲಿದ್ದಾರೆ ಎಂದು ಪೈಲೆಟ್ಗಳ ಸಂಘ ಹೇಳಿದೆ.
ವಿಮಾನ ಚಾಲಕರ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಏರ್ ಇಂಡಿಯಾ ಬಗೆಹರಿಸಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಪ್ರತಿಭಟನೆಯಂತ ನಿರ್ಧಾರ ಕೈಗೊಳ್ಳಬೇಡಿ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಪೈಲೆಟ್ಗಳಿಗೆ ಏರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಕ ನಿರ್ದೇಶಕ ಅಶ್ವನಿ ಲೋಹಾನಿ ಮನವಿ ಮಾಡಿದ್ದಾರೆ.
ಒಂದೇ ಕೆಲಸಕ್ಕೆ ವೇತನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇಂಡಿಯನ್ ಏರ್ಲೈನ್ಸ್ನ ಕಮಾಂಡರ್ಗೆ ಪ್ರತಿ ತಿಂಗಳು 3.5 ಲಕ್ಷ ವೇತನ ನೀಡಲಾಗುತ್ತಿದೆ ಇದೇ ಕೆಲಸಕ್ಕೆ ಏರ್ ಇಂಡಿಯಾದ ಕಮಾಂಡರ್ಗೆ 6.5 ಲಕ್ಷ ನೀಡಲಾಗುತ್ತಿದೆ ಇದು ಸಂಪೂರ್ಣ ತಾರತಮ್ಯ ಮಾಡಲಾಗುತ್ತಿದೆ. ಇದನ್ನನು ಪೈಲೆಟ್ಗಳು ಸಹಿಸಲು ಸಾಧ್ಯವಾಗುವುದಿಲ್ಲ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ಮಾಡಲಾಗುವುದು ಅಲ್ಲದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದ್ದಾರೆ.