ಬರೇಲಿ: ಸ್ವಘೋಷಿತ ದೇವಮಾನವ ಅಸಾರಾಮ್ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಾಕ್ಷಿಯಾಗಿದ್ದ ವ್ಯಕ್ತಿ ಮೇಲೆ ಅಪರಿಚಿತರು ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ಧಾರೆ.
ಶಾಜನ್ಪುರ ಜಿಲ್ಲೆಯ ಪುವಯನ್ ಎಂಬಲ್ಲಿ ಘಟನೆ ನಡೆದಿದ್ದು ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಕೃಪಾಲ್ ಸಿಂಗ್ ಎಂಬ (35) ಸಾಕ್ಷಿ ಮೇಲೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಮನೆಗೆ ಹಿಂತಿರುಗುತ್ತಿದ್ದ ಅಪರಿಚಿತರು ನಡೆಸಿದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಕೃಪಾಲ್ ಸಿಂಗ್ ಈಗ ಬರೇಲಿಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಗುಂಡೇಟಿನಿಂದ ಜರ್ಜರಿತರಾಗಿರುವ ಕೃಪಾಲ್ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅಸಾರಾಂ ಬಾಪು ವಿರುದ್ಧ ಸಾಕ್ಷಿ ಹೇಳಲು ನಿರ್ಧರಿಸಿದ ಮೇಲೆ ಕೃಪಾಲ್ಗೆ ಸ್ವಘೋಷಿತ ದೇವಮಾನವನ ಕಡೆಯವರಿಂದ ಭಾರಿ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಹೆಚ್ಚುವರಿ ಸಿಟಿ ಮ್ಯಾಜಿಸ್ಟ್ರೇಟ್ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಸಾರಾಂನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಖಾಸಗಿ ಸಾರಿಗೆ ಸಂಸ್ಥೆಯ ಮಾಲೀಕನ ಮಗಳ ಪರವಾಗಿ ಕೃಪಾಲ್ ಸಾಕ್ಷಿ ನುಡಿಯಲು ಮುಂದೆ ಬಂದಿದ್ದ. ಆತ ಸಾರಿಗೆ ಸಂಸ್ಥೆಯಲ್ಲಿ ನೌಕರನಾಗಿದ್ದಾನೆ.
ಇದೇ ವರ್ಷದ ಜನವರಿಯಲ್ಲಿ ಇನ್ನೊಬ್ಬ ಸಾಕ್ಷಿಯನ್ನು ಮುಜಫರ್ನಗರದಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಆತ ಸ್ವಘೋಷಿತ ದೇವಮಾನವನ ಆಶ್ರಮದಲ್ಲಿ ಅಡುಗೆಯವನಾಗಿ ದುಡಿಯುತ್ತಿದ್ದ.