ಶಿರಡಿ: ಮೋಬೈಲ್ ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ರಿಂಗ್ ಟೋನ್ ಹಾಕಿಕೊಂಡಿದ್ದ ಮಹಾರಾಷ್ಟ್ರದ ದಲಿತ ಯುವಕನೋರ್ವನ ಹತ್ಯೆ ಮಾಡಲಾಗಿದೆ. ತನ್ನ ಮೊಬೈಲ್ ಗೆ ಒಳಬರುವ ಕರೆಗಳಿಗೆ 21 ವರ್ಷದ ದಲಿತ ಯುವಕ ಸಾಗರ್, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತಾದ ಗೀತೆಯನ್ನು ರಿಂಗ್ ಟೋನ್ ಆಗಿಟ್ಟುಕೊಂಡಿದ್ದ.
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿರಡಿಗೆ ಬಂದಿದ್ದ ಸಾಗರ್ ಶೇಜ್ವಾಲ್ ಎಂಬ 21 ವರ್ಷದ ನರ್ಸಿಂಗ್ ವಿದ್ಯಾರ್ಥಿ ತನ್ನ ಸಂಬಂಧಿಗಳ ಜತೆ ಸ್ಥಳೀಯ ಬಾರ್ವೊಂದರಲ್ಲಿ ಕುಳಿತಿದ್ದ. ಆಗ ಆತನ ಮೊಬೈಲ್ ಗೆ ಕರೆ ಬಂದಿದ್ದು, ‘ನಿಮ್ಮ ಮನಬಂದಂತೆ ಕೂಗಿ, ಭೀಮನ ಕೋಟೆ ಭದ್ರವಾಗಿದೆ ಎಂಬ ಅಂಬೇಡ್ಕರ್ ಅವರ ಕುರಿತ ಗೀತೆ ಮೊಳಗಿದೆ.
ಪಕ್ಕದಲ್ಲೇ ಕುಳಿತಿದ್ದ ಯುವಕರ ಗುಂಪು, ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚನೆ ನೀಡಿದೆ. ಇದರಿಂದ ಕುಪಿತರಾದ ದಲಿತ ಯುವಕ, ತನಗೆ ಆದೇಶಿಸಿದ ಯುವಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ವ್ಯಕ್ತಿಯೊಬ್ಬ ಸಿಟ್ಟಿನಿಂದ ಸಾಗರ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ನಂತರ ಗುಂಪಿನಲ್ಲಿದ್ದ ಇತರರು ಮನಬಂದಂತೆ ಯುವಕನನ್ನು ಥಳಿಸಿದ್ದಾರೆ. ಹಲ್ಲೆಯಿಂದ ದಲಿತ ಯುವಕ ಮೃತಪಟ್ಟಿದ್ದಾನೆ.
ಯುವಕನ ಶವ ಶಿರಡಿ ಸಮೀಪದ ಶಿಂಗ್ವೆ ಗ್ರಾಮದಲ್ಲಿ ಪತ್ತೆಯಾಗಿತ್ತು. ಯುವಕನ ಮೇಲೆ ಹಲವಾರು ಬಾರಿ ಬೈಕ್ ಹತ್ತಿಸಲಾಗಿದ್ದು, ಕಲ್ಲಿನಿಂದ ಜಜ್ಜಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಮೊಬೈಲ್ ನಾಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿ ನೆರವಿನಿಂದ ಹಂತಕರನ್ನು ಪತ್ತೆ ಹಚ್ಚಿದ್ದಾರೆ.