ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟ ಅರುಣ್ ಜೇಟ್ಲಿ, ಇದಕ್ಕೆ ಸಾಕ್ಷಿಯಾದ ಇತರ ಸಚಿವರು.
ನವದೆಹಲಿ: ಒಂದು ದೇಶದ ಅಭಿವೃದ್ಧಿ ನಿಂತಿರುವುದು ಪ್ರಗತಿಪರ ಯೋಜನೆಗಳ ಮೇಲೆ ಅಂತ ಅಭಿವೃದ್ಧಿ ದೃಷ್ಟಿಕೋನದ ಮೂಲಕ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಒಂದು ವರ್ಷದಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮುಕ್ತ ಕಂಠದಿಂದ ಹೊಗಳಿದರು.
ಹೊಸ ದೃಷ್ಟಿಕೋನದಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ನಾವು ಭಾರತವನ್ನು ಉದ್ಯಮ ಸ್ನೇಹಿ ದೇಶವನ್ನಾಗಿ ಮಾಡುವ ಮತ್ತು ಆರ್ಥಿಕ ಪ್ರಗತಿ ಸಾಧಿಸುವ ಭರವಸೆಯನ್ನು ಈಡೇರಿಸುವತ್ತ ಹೆಜ್ಜೆ ಇಡುತ್ತಿರುವುದಾಗಿ ಹೇಳಿದ್ದಾರೆ. ತ್ವರಿತಗತಿ, ಸ್ಪಷ್ಟತೆ ಮತ್ತು ಪಾರದರ್ಶಕ ಪರಿಭಾಷೆಯಲ್ಲಿ ಕೂಡ ಬದಲಾವಣೆಯಾಗಿದ್ದು, ಇದು ದೇಶಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿದೆ ಎಂದರು.
ದೇಶದ ಮೂಲಭೂತ, ಗ್ರಾಮೀಣಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸುವುದಾಗಿ ಹೇಳಿದ ಅವರು, ಕೇಂದ್ರ ಸರ್ಕಾರ ಜಿಎಸ್ ಟಿ ಮತ್ತು ಭೂಸ್ವಾಧೀನ ಮಸೂದೆ ಜಾರಿಗೆ ಬದ್ಧವಾಗಿರುವುದಾಗಿ ಎಂದರು. ಈಗ ದೇಶದಲ್ಲಿ ನಿರೀಕ್ಷೆಯ ವಾತಾವರಣ ಏರ್ಪಟ್ಟಿದೆ. ದೇಶಕ್ಕೆ ಭ್ರಷ್ಟಾಚಾರ-ರಹಿತ ಆಡಳಿತ ನೀಡಿರುವುದು ಸರಕಾರದ ಪ್ರಮುಖ ಸಾಧನೆ. ಜನಸಾಮಾನ್ಯನ ರಾಜಕೀಯ ಭ್ರಷ್ಟಾಚಾರದಿಂದ ಮುಕ್ತನಾಗಿದ್ದಾನೆ. ಇದನ್ನು ನಮ್ಮ ಸರ್ಕಾರ ಮಾಡಿ ತೋರಿಸಿದೆ ಎಂದರು.
ಆಡಳಿತಾರೂಢ ಎನ್ ಡಿಎ ಕೇಂದ್ರ ಸರ್ಕಾರ ಬೆಳವಣಿಗೆ ಮತ್ತು ಅಭಿವೃದ್ಧಿ ಪರವಾಗಿದೆ. ತೆರಿಗೆ ನೀತಿಯಿಂದಾಗಿ ಯಾವುದೇ ವಿವಾದ ಸೃಷ್ಟಿಯಾಗಿಲ್ಲ. ನಮ್ಮ ಸರ್ಕಾರ ಎಲ್ಲಾ ನಿರ್ಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕೈಗೊಳ್ಳುತ್ತದೆ. ಒಂದು ವರ್ಷದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ (ಶೇ.7.5.8) ಹೆಚ್ಚಳವಾಗಿದೆ. ಇದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದರು.