ಪ್ರತಿಭಟನೆ ಹೆಸರಿನಲ್ಲಿ ಪುಂಡಾಟ ಮಾಡುವ ಪಡ್ಡೆ ಹುಡುಗರಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಬಂದ್ ನೆಪದಲ್ಲಿ ಹಿಂಸಾಚಾರ ನಡೆಸಿ, ಆಸ್ತಿ-ಪಾಸ್ತಿ ಹಾನಿ ಮಾಡುವವರಿನ್ನು ಜೈಲು ಕಂಬಿ ಎಣಿಸುವ ದಿನ ದೂರವಿಲ್ಲ.
ಪ್ರತಿಭಟನೆ, ಧರಣಿ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದ್ದರೂ ಸಹ ಇದರ ಹೆಸರಲ್ಲಿ ಪುಂಡಾಟ ನಡೆಸುವ ವ್ಯಕ್ತಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಸಾರ್ವಜನಿಕ ಆಸ್ತಿ ನಷ್ಟ ನಿಯಂತ್ರಣ ಕಾಯ್ದೆ-1984ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರ, ಪುಂಡಾಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು ಪ್ರತಿಭಟನೆ ನಡೆಸುವ ಸಮಯದಲ್ಲಿ ಆಸ್ತಿ-ಪಾಸ್ತಿ ಹಾನಿ ಮಾಡುವವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಸಮಿತಿ ಶಿಫಾರಸು ಮಾಡಿದ್ದು ಇನ್ನು ಆಸ್ತಿಗೆ ಹಾನಿ ಮಾಡಿದವರಿಂದಲೇ ಆಸ್ತಿಯ ಮಾರುಕಟ್ಟೆ ಮೌಲ್ಯ ವಸೂಲಿ ಮಾಡುವುದರ ಜೊತೆಗೆ, ಆಸ್ತಿ ಹಾನಿ ಮಾಡಿರುವುದಕ್ಕೆ ದಂಡ ವಿಧಿಸಲು ಅವಕಾಶ ಕಲ್ಪಿಸಲು ಶಿಫಾರಸು ಮಾಡಿದೆ.
ವಿಶೇಷವೆಂದರೆ ಕಾರ್ಯಕರ್ತರು ಮಾಡಿದ ಕೃತ್ಯಕ್ಕೆ, ಅವರು ಯಾವ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೋ ಆ ಸಂಘಟನೆಗೂ ಶಿಕ್ಷೆ ವಿಧಿಸಬಹುದಾಗಿದ್ದು ಪದೇ ಪದೇ ಈ ರೀತಿಯ ಕೃತ್ಯ ನಡೆಸುವ ಸಂಘಟನೆಗಳ ನಿಷೇಧವನ್ನೂ ಮಾಡಬಹುದು ಎಂದು ತಿಳಿಸಿದೆ . ಹಾಗಾಗಿ ಒಂದೊಮ್ಮೆ ಕೇಂದ್ರದ ಈ ನಿರ್ಧಾರ ಅನುಷ್ಠಾನಕ್ಕೆ ಬಂದ ಪಕ್ಷದಲ್ಲಿ ಬಂದ್ ಹೆಸರಿನಲ್ಲಿ ವಿರೋಧಿಗಳ ಮನೆಗೆ ಕಲ್ಲು ಒಗೆಯುವುದು ತಪ್ಪಲಿದೆ.!