ಹೈದ್ರಾಬಾದ್, ಮೇ 15: ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬ ಮುಂಜಾನೆ ಕತ್ತಿಯಿಂದ ತಾಯಿ, ಪತ್ನಿ ಹಾಗೂ 14 ವರ್ಷದ ಪುತ್ರಿಯ ಕತ್ತುಕೊಯ್ದು ಭೀಕರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಪಹಾಡಿ ಶರೀಫಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ತಾಯಿ ಸುಭದ್ರಾ (65), ಪತ್ನಿ ರಾಧಿಕಾ (40) ಮತ್ತು ಪುತ್ರಿ ಅಕ್ಷಯಾ (14) ಹತ್ಯೆಯಾದ ನತದೃಷ್ಟರು. ಹೈದ್ರಾಬಾದ್ ಬಾಲಾಪುರದಲ್ಲಿ ರಾಮರೆಡ್ಡಿ ಎಂಬಾತ ತಾಯಿ, ಪತ್ನಿ, ಪುತ್ರಿಯೊಂದಿಗೆ ವಾಸವಾಗಿದ್ದನು. ಕಳೆದ ಒಂದು ತಿಂಗಳಿನಿಂದ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ.ಇವರ ಮನೆಯ ಮೊದಲ ಮಹಡಿಯಲ್ಲಿ ರಾಮರೆಡ್ಡಿ ಸಹೋದರ ವಾಸವಾಗಿದ್ದಾರೆ. ಇತ್ತೀಚೆಗೆ ಆಸ್ತಿ ವಿಚಾರವಾಗಿ ಸಹೋದರರು ಮತ್ತು ತಾಯಿ ಜತೆ ಜಗಳ ನಡೆಯುತ್ತಿದ್ದರಿಂದ ರಾಮರೆಡ್ಡಿ ಖಿನ್ನತೆಗೆ ಒಳಗಾಗಿದ್ದನು ಎನ್ನಲಾಗಿದೆ.
ರಾತ್ರಿ ಸಹ ತಾಯಿ-ಪತ್ನಿ ಜತೆ ರಾಮರೆಡ್ಡಿ ಜಗಳವಾಡಿದ್ದನು. ನಂತರ ಎಲ್ಲರೂ ಊಟ ಮಾಡಿ ಮಲಗಿದ್ದಾರೆ. ಮುಂಜಾನೆ ರಾಮರೆಡ್ಡಿ ಏಳುತ್ತಿದ್ದಂತೆ ಕರುಣೆಯೇ ಇಲ್ಲದೆ ಕತ್ತಿಯಿಂದ ತಾಯಿ, ಪತ್ನಿ ಮತ್ತು ಪುತ್ರಿಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿ ನಂತರ ಮನೆಯ ಬಳಿಯಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತ ಬಾವಿಗೆ ಹಾರಿದ್ದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಆತನನ್ನು ರಕ್ಷಿಸಿ, ವಿಚಾರ ಕೇಳಲಾಗಿ ನಡೆದ ಘಟನೆ ವಿವರಿಸಿದ್ದಾನೆ. ಈ ವಿಷಯ ತಿಳಿದ ಪಹಾಡಿ ಶರೀಫಾ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಮರೆಡ್ಡಿಯನ್ನು ಬಂಧಿಸಿ, ಮೂರೂ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಘಟನೆಯಿಂದ ಸುತ್ತಮುತ್ತಲ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.