ಚೆನ್ನೈ: ವಿಶ್ವ ಹಿಂದೂ ಪರಿಷದ್ ಆರೋಪಿಸಿದಂತೆ ಯಾವುದೇ ತಪ್ಪು ಕಂಡುಬಂದಿಲ್ಲ ಎಂದಿರುವ ಮದ್ರಾಸ್ ಹೈಕೋರ್ಟ್, ಇನ್ನೂ ಬಿಡುಗಡೆಯಾಗಬೇಕಿರುವ ಕಮಲ್ ಹಾಸನ್ ನಟನೆಯ ‘ಉತ್ತಮ ವಿಲನ್’ ಸಿನೆಮಾದಲ್ಲಿ ದೇವರು ವಿಷ್ಣುವಿನ ಬಗ್ಗೆ ಬಳಸಿರುವ ಕೆಲವು ನಿಂದನಾತ್ಮಕ ಪದಗಳನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಕಮಲಹಾಸನ್ ನಟನೆಯ ಈ ಸಿನೆಮಾದ ಹಾಡೊಂದರಲ್ಲಿ “ಉದಿರಥಿನ್ ಕಥೈ’ (ರಕ್ತದ ಕಥೆ) ವಿಷ್ಣುವಿನ ಅವತಾರಗಳ ಬಗ್ಗೆ ನಿಂದನಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ದೂರಿ ವಿ ಎಚ್ ಪಿ ಸಂಘಟನೆಯ ಕಾರ್ಯದರ್ಶಿ ಎಸ್ ರಾಜಾ ಕೋರ್ಟ್ ಮೊರೆ ಹೋಗಿದ್ದರು. ನಿರ್ಮಾಪಕರು ಸಿನೆಮಾವನ್ನು ಬಿಡುಗಡೆ ಮಾಡದಂತೆ ಮಧ್ಯಂತರ ತಡೆಯನ್ನು ಕೂಡ ಕೋರಿದ್ದರು. ವಿಷ್ಣುವನ್ನು ಟೀಕೆ ಮಾಡಲು ಪ್ರಯತ್ನಿಸಲಾಗಿದೆ ಇದು ವಿಷ್ಣುವಿಗೆ ಅವಮಾನ ಮಾಡುವುದಷ್ಟೇ ಅಲ್ಲ ಅಸಂಖ್ಯಾತ ಹಿಂದುಗಳ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತದೆ ಎಂದು ಅವರು ದೂರಿದ್ದರು.
ಸೆನ್ಸಾರ್ ಮಂಡಲಿ, ತಮಿಳುನಾಡು ಗೃಹ ಕಾರ್ಯದರ್ಶಿ, ಚೆನ್ನೈ ಪೊಲೀಸ್ ಆಯುಕ್ತ ಇವರುಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೂಡ ಅರ್ಜಿದಾರ ದೂರಿದ್ದರು. ಇದನ್ನೆಲ್ಲಾ ಪರಿಗಣಿಸಿದ ನ್ಯಾಯಾಧೀಶ ಟಿ ರಾಜ, ಆ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅರ್ಜಿಯನ್ನು ವಜಾ ಮಾಡಿದ್ದಾರೆ.
(ಕ.ಪ್ರ)