ಖರ್ಗಾಂವ್(ಮ.ಪ್ರ), ಏ.22-ನಾವು ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ ಹೀಗೆ ಹಲವು ಕಾರ್ಯಕ್ರಮ ಮಾಡುವುದು ವಾಡಿಕೆ. ಆದರೆ, ಮಧ್ಯಪ್ರದೇಶದ ಖರ್ಗಾಂವ್ ಜಿಲ್ಲೆಯ ಮಾಡ್ಲೇಶ್ವರ್ ಎಂಬ ಹಳ್ಳಿಯಲ್ಲಿ ಮಹಾ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ರ ಪುಣ್ಯತಿಥಿ ಮತ್ತು ಜನ್ಮ ದಿನಗಳನ್ನು ಪ್ರತಿವರ್ಷ ತಪ್ಪದೆ ಆಚರಿಸುತ್ತ ಬಂದಿದ್ದಾರೆ. ವಿಶೇಷವೆಂದರೆ ಇದಕ್ಕೆ ಅವರು ದೇಣಿಗೆ ಸಂಗ್ರಹಿಸುವುದಿಲ್ಲ. 1990ರಿಂದ ಈ ಊರಿನಲ್ಲಿ ಈ ಸಂಪ್ರದಾಯವನ್ನು ಬೆಳೆಸಿಕೊಂಡು ಬರಲಾಗಿದೆ. ಈ ಕಾರ್ಯಕ್ರಮಗಳಂದು ವಿವಿಧ ಕ್ಷೇತ್ರಗಳ ಸಾಧಕರನ್ನು ಕರೆತಂದು ಸನ್ಮಾನಿಸಲಾಗುತ್ತದೆ.
ಸನ್ಮಾನಿತರಿಗೆ ಒಂದು ಶಾಲು ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಅನೇಕರಿಗೆ ಈ ಸನ್ಮಾನ ನೊಬೆಲ್ ಪಾರಿತೋಷಕಕ್ಕೆ ಸಮಾನ.
ಈ ಕಾರ್ಯಕ್ರಮವನ್ನು ರೂಪಿಸುವ ಸಂಚಾಲಕರಾಗಿ ಸಂಜೀವ್ ಎಸ್. ಮಯೋಡೆ ಕಾರ್ಯನಿರ್ವಹಿಸುತ್ತಾರೆ. ಇತ್ತೀಚೆಗೆ (ಕಳೆದ ಶನಿವಾರ) ಈ ನೊಬೆಲ್ ಪುರಸ್ಕೃತ ವಿಜ್ಞಾನಿಯ 60ನೆ ಪುಣ್ಯತಿಥಿ ಆಚರಿಸಲಾಯಿತು. ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಎಂ.ಡಬ್ಲ್ಯು.ದೇವ್ ಅವರು 1990ರಲ್ಲಿ ಐನ್ಸ್ಟೀನ್ ಕುರಿತ ಈ ಕಾರ್ಯಕ್ರಮ ಆರಂಭಿಸಿದ್ದರು. ಈ ವಿಶ್ವ ಕಂಡ ಅದ್ಭುತ ಪ್ರತಿಭೆಯ ವಿಜ್ಞಾನಿ ಐನ್ಸ್ಟೀನ್ರ ಸ್ಮರಣೆ ನಮಗೆ ಹೆಮ್ಮೆ ಎನ್ನುತ್ತಾರೆ ನಿವೃತ್ತ ಪ್ರಿನ್ಸಿಪಾಲ್ ಬಾಲಕೃಷ್ಣ ಉಪಾಧ್ಯಾಯ.