ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಚಿವ ಸಹೋದ್ಯೋಗಿಗಳು ಕೆಲಸ ಆರಂಭಿಸಿದ ಮೊದಲ ದಿನವೇ ಸಚಿವಾಲಯಕ್ಕೆ ಪತ್ರಕರ್ತರ ಪ್ರವೇಶ ನಿರ್ಬಂಧಿಸಲಾಯಿತು. ಇದರಿಂದಾಗಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಪತ್ರಿಕಾಗೋಷ್ಠಿಯಲ್ಲಿ ಗದ್ದಲ ಉಂಟಾಯಿತು.
ಫೆ. 14ರಂದು ಶನಿವಾರ ಅಧಿಕಾರ ವಹಿಸಿಕೊಂಡ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಸೋಮವಾರ ತಮ್ಮ ಕಚೇರಿಗಳಿಗೆ ಹಾಜರಾಗಿ ಕೆಲಸ ಆರಂಭಿಸಿದರು. ಹೊಸ ಸರ್ಕಾರದ ಕಲಾಪ ವರದಿ ಮಾಡಲು ಸಚಿವಾಲಯಕ್ಕೆ ಆಗಮಿಸಿದ ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು ಮತ್ತು ಛಾಯಾಗ್ರಾಹಕರನ್ನು ಭದ್ರತಾ ಸಿಬ್ಬಂದಿ ಬಾಗಿಲಲ್ಲಿ ತಡೆದರು.
ಹಿರಿಯ ಅಧಿಕಾರಿಗಳಿಂದ ಮೌಖಿಕ ಆದೇಶವಿರುವುದರಿಂದ ಪತ್ರಕರ್ತರನ್ನು ಒಳಬಿಡಲು ಸಾಧ್ಯವಿಲ್ಲವೆಂದು ಭದ್ರತಾ ಸಿಬ್ಬಂದಿ ಸ್ಪಷ್ಟಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಲು ಹಿರಿಯ ಅಧಿಕಾರಿಗಳು ಸಿಗಲಿಲ್ಲ. ಅನಂತರ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಂಪುಟ ಸಭೆ ತೀರ್ಮಾನಗಳನ್ನು ಕುರಿತು ವಿವರಿಸಲು ಉಪ ಮುಖ್ಯಮಂತ್ರಿ ಮನೀಷ್ ಸಿಸೋ-ಡಿಯಾ ಪತ್ರಿಕಾಗೋಷ್ಠಿಗೆ ಬಂದಾಗ ತೀವ್ರ ಗದ್ದಲ ಉಂಟಾಯಿತು. ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದ ಅವರು ಎದ್ದು ಹೊರ ನಡೆದರು.
ಪತ್ರಕರ್ತರು ನಡೆದುಕೊಳ್ಳುವ ರೀತಿ ಇದಲ್ಲ. ಕೆಲಸ ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳಾಗಬಹುದು. ಅದನ್ನೇ ದೊಡ್ಡದು ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಹೇಳಿದರು. ಅನಂತರ ಸಿಸೋಡಿಯಾ ಪತ್ರಕರ್ತರ ಕರೆಗಳನ್ನು ಸ್ವೀಕರಿಸಲಿಲ್ಲ.
ಶನಿವಾರ ಎಎಪಿ ಸರ್ಕಾರ ಅಧಿಕಾರ ಸ್ವೀಕರಿಸಿದ ಬಳಿಕವೂ ಇದೇ ರೀತಿ ವಾತಾವರಣ ಸೃಷ್ಟಿಯಾಗಿತ್ತು. ವಿಧಾನಸೌಧಕ್ಕೆ ಪತ್ರಕರ್ತರ ಪ್ರವೇಶ ನಿರಾಕರಿಸಲಾಗಿತ್ತು.
ದೆಹಲಿಯಲ್ಲಿ ಗುಡಿಸಲು ನೆಲಸಮ ಇಲ್ಲ: ದೆಹಲಿಯಲ್ಲಿ ಗುಡಿಸಲುಗಳನ್ನು ನೆಲಸಮ ಮಾಡಬಾರದೆಂದು ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸೋಮವಾರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗುಡಿಸಲುಗಳನ್ನು ನೆಲಸಮ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿತು. ಸದ್ಯ ಜಾರಿಯಲ್ಲಿರುವ ನೆಲಸಮ ಕಾನೂನುಗಳನ್ನು ಪರಾಮರ್ಶೆ ಮಾಡುವವರೆಗೆ ನಗರದೊಳಗೆ ನೆಲಸಮ ಕಾರ್ಯಾಚರಣೆ ನಡೆಸಬಾರದು ಎಂದು ಆದೇಶಿಸಿತು.
ವಿಧಾನಸಭೆ ಚುನಾವಣೆ ಸಮಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗುಡಿಸಲುಗಳನ್ನು ನೆಲಸಮ ಮಾಡುವುದಿಲ್ಲ ಎಂದು ಎಎಪಿ ಭರವಸೆ ನೀಡಿತ್ತು. ಆದರೆ, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನಡೆಯುವ ಕಾರ್ಯಾಚರಣೆಗೆ ಈ ನಿರ್ಧಾರ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಮಾರ್ಚ್ 23ಕ್ಕೆ ಮೊದಲ ಅಧಿವೇಶನ: ದೆಹಲಿ ವಿಧಾನಸಭೆ ಮೊದಲ ಅಧಿವೇಶನ ಈ ತಿಂಗಳ 23 ಹಾಗೂ 24ರಂದು ಕರೆಯುವಂತೆ ಸಚಿವ ಸಂಪುಟ ಶಿಫಾರಸು ಮಾಡಿದೆ. ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣ ವಚನ ಹಾಗೂ ಸ್ಪೀಕರ್, ಉಪ ಸ್ಪೀಕರ್ ಚುನಾವಣೆ ನಡೆಸಲು ಅಧಿವೇಶನ ಕರೆಯುವಂತೆ ಸಂಪುಟ ಶಿಫಾರಸು ಮಾಡಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿ ಎಲ್ಲ ಸಚಿವರು ಭಾಗವಹಿಸಿದ್ದರು.
ಚುನಾವಣೆ ವೇಳೆ ನೀಡಲಾಗಿರುವ ಅರ್ಧ ದರದಲ್ಲಿ ವಿದ್ಯುತ್ ಪೂರೈಸುವ ಭರವಸೆ ಜಾರಿಗೆ ಸೂಕ್ತ ಪ್ರಸ್ತಾವನೆ ಕಳುಹಿಸುವಂತೆ ಕೇಜ್ರಿವಾಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.