ಫರೀದಾಬಾದ್(ಉತ್ತರಪ್ರದೇಶ),ಜ.28: ವೇಗವಾಗಿ ಬರುತ್ತಿದ್ದ ರೈಲಿನ ಎದುರು ಸಾಹಸ ಮಾಡುವ ಕಪಿಚೇಷ್ಟೆಗೆ ಕೈ ಹಾಕಿದ ಮೂವರು ವಿದ್ಯಾರ್ಥಿಗಳು ಅದೇ ರೈಲಿಗೆ ಸಿಕ್ಕಿ ಛಿದ್ರ ಛಿದ್ರವಾಗಿ ಹೋದ ದಾರುಣ ಘಟನೆ ಉತ್ತರಪ್ರದೇಶದ ಫರೀದಾಬಾದ್ನಲ್ಲಿ ನಡೆದಿದೆ.
ವಿದ್ಯಾರ್ಥಿಗಳು ತಾಜ್ಮಹಲ್ ನೋಡಲು ಪ್ರವಾಸ ಹೊರಟಿದ್ದರು. ರೈಲು ನಿಲ್ದಾಣದಲ್ಲಿ ನಿಂತಿದ್ದ ಇವರು ರೈಲು ಧಾವಿಸಿ ಬರುತ್ತಿರುವುದನ್ನು ಕಂಡು, ಹಳಿಯ ಮೇಲೆ ನಿಂತು ರೋಮಾಂಚಕವಾಗಿ ರೈಲಿನೆದುರು ತಮ್ಮದೇ ಮೊಬೈಲ್ ಕ್ಯಾಮೆರಾಗಳಿಂದ ತಮ್ಮದೇ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳಲು ಮುಂದಾದರು.
ಇವರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾಗ ರೈಲು ವೇಗವಾಗಿ ಇವರ ಮೇಲೆ ನುಗ್ಗಿ ಹೊರಟೇಹೋಗಿತ್ತು. ನಾಲ್ವರ ಪೈಕಿ ಅದೃಷ್ಟವಶಾತ್ ಅನೀಶ್ ಎಂಬ ವಿದ್ಯಾರ್ಥಿ ಬದುಕುಳಿದರೆ, ಅವನ ಗೆಳೆಯರಾದ ಮೊರಾದಬಾದ್ನ ಯಶೂಬ್, ಫರೀದಾಬಾದ್ನ ಇಕ್ಬಾಲ್ ಮತ್ತು ನವದೆಹಲಿಯ ಅಫ್ಜಲ್ ರೈಲಿನಡಿ ಸಿಕ್ಕಿ ಗುರುತೂ ಸಿಗದಂತೆ ಛಿದ್ರವಾಗಿ ಹೋದರು.
ರೈಲು ಬರುವಾಗ ಅದರೆದುರೇ ನಿಂತು ತಾವೇ ತೆಗೆದುಕೊಂಡ ತಮ್ಮದೇ ರೋಮಾಂಚಕಾರಿ ಚಿತ್ರಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಬೇಕೆಂಬುದು ನಮ್ಮ ಬಯಕೆಯಾಗಿತ್ತು ಎಂದು ಬದುಕುಳಿದಿರುವ ಅನೀಶ್ ಹೇಳಿದ್ದಾನೆ. ಕೊಸಿಕೊಲಾದ ಮಥುರಾ ಬಳಿ ಈ ಘಟನೆ ನಡೆದಿದ್ದು, ಯುವಕರ ಕುಟುಂಬದವರ ಗೋಳು ಮುಗಿಲು ಮುಟ್ಟಿದೆ.