ನವದೆಹಲಿ (ಪಿಟಿಐ): ಸ್ಪೈಸ್ ಜೆಟ್ ಸಂಸ್ಥೆಯ ವಿಮಾನಗಳನ್ನು ನಿಲುಗಡೆಗಾಗಿ ವಿಮಾನ ನಿಲ್ದಾಣದಲ್ಲಿ ನೀಡಲಾಗಿದ್ದ 186 ಸ್ಥಳಗಳನ್ನು ಹಿಂದಕ್ಕೆ ಪಡೆದುಕೊಂಡಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಸಂಸ್ಥೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ತನ್ನ ಉದ್ಯೋಗಿಗಳಿಗೆ 10 ದಿನದ ಒಳಗೆ ಪಾವತಿಸುವಂತೆ ಸೂಚಿಸಿದೆ.
ವಿಮಾನನಿಲ್ದಾಣಗಳು, ತೈಲಕಂಪೆನಿಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಬಾಕಿ ಉಳಿಸಿಕೊಂಡಿರುವ 1,500 ಕೋಟಿಗೂ ಅಧಿಕ ಮೊತ್ತವನ್ನು ಪಾವತಿಸಲು ಡಿ. 15ರವರೆಗೆ ಸ್ಪೈಸ್ ಜೆಟ್ ಸಂಸ್ಥೆಗೆ ಸಮಯಾವಕಾಶ ನೀಡಿದೆ. ಸ್ಪೈಸ್ಜೆಟ್ ಸಂಸ್ಥೆಯ ಸಂಕಷ್ಟ ತೀವ್ರ ಕಳವಳ ಉಂಟುಮಾಡಿದೆ ಎಂದಿರುವ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ‘ಇದು ನಮಗೆ ಹೃದಯಾಘಾತ ಉಂಟುಮಾಡುವಂತೆ ಇದೆ’ ಎಂದು ಹೇಳಿದ್ದರು.
ಸ್ಪೈಸ್ ಜೆಟ್ ನಿರಾಕರಣೆ
ಐಎಎನ್ಎಸ್ ವರದಿ: ವಿಮಾನ ನಿಲ್ದಾಣ ಬಳಕೆಯ ದೈನಂದಿನ ಶುಲ್ಕವನ್ನು ಪ್ರತಿ ದಿನವೇ ಪಾವತಿಸುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ (ಎಎಐ) ಯಾವುದೇ ಸೂಚನೆ ಬಂದಿಲ್ಲ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಹೇಳಿದೆ.
‘ಪ್ರತಿ ದಿನದ ಶುಲ್ಕವನ್ನು ಅಂದೇ ಪಾವತಿಸಿ ನಿಲ್ದಾಣ ಬಳಸುವ ಕಾರರನ್ನು ಎಎಐ ಜತೆ ನಾವು ಮಾಡಿಕೊಂಡಿಲ್ಲ’ ಎಂದು ಸ್ಪೈಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಸಂಜೀವ್ ಕಪೂರ್ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಗಳು ನಿಲ್ದಾಣ ಬಳಕೆಗಾಗಿ ಎಎಐಗೆ ತಿಂಗಳಿಗೆ ಒಮ್ಮೆ ಹಣ ಪಾವತಿಸುತ್ತವೆ. ಆದರೆ, ಸ್ಪೈಸ್ ಜೆಟ್ ಈ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡ ಕಾರಣ ಅದಕ್ಕೆ ದೈನಂದಿನ ಶುಲ್ಕವನ್ನು ಪ್ರತಿ ದಿನ ಪಾವತಿಸಿ ನಿಲ್ದಾಣ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ವರದಿಯಾಗಿತ್ತು.