ರಾಷ್ಟ್ರೀಯ

ಮಹಾರಾಷ್ಟ್ರ ಚುನಾವಣೆ: ಸಂಕಷ್ಟದಲ್ಲಿ ಸೇನಾ–ಬಿಜೆಪಿ ಮೈತ್ರಿ; ಮೋದಿ ಮಧ್ಯಪ್ರವೇಶ

Pinterest LinkedIn Tumblr

uddhav

ನವದೆಹಲಿ/ಮುಂಬೈ (ಪಿಟಿಐ): ‘ಮಹಾರಾಷ್ಟ್ರ ವಿಧಾನ­ಸಭೆ ಚುನಾವಣೆಯಲ್ಲಿ ೨8೮ ಸ್ಥಾನಗಳ ಪೈಕಿ ಬಿಜೆಪಿಗೆ ೧೧೯ ಸ್ಥಾನಗಳಿಗಿಂತ ಹೆಚ್ಚಿಗೆ ಕೊಡುವ ಮಾತೇ ಇಲ್ಲ’ ಎಂದು ಶಿವ­ಸೇನಾ ಭಾನುವಾರ ಕಡ್ಡಿ­ಮುರಿದಂತೆ ಹೇಳಿದೆ.

ಇದರಿಂದ ಬಿಜೆಪಿ ಮತ್ತು ಶಿವಸೇನಾ ನಡುವಿನ ಎರಡೂ­ವರೆ ದಶಕಗಳ ಮೈತ್ರಿ ಮುರಿದು ಬೀಳುವ ಹಂತಕ್ಕೆ ಬಂದಿದೆ. ಬಿಕ್ಕಟ್ಟು ಶಮನಕ್ಕೆ ಬಿಜೆಪಿ ಕಸರತ್ತು ನಡೆಸಿದ್ದು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನು­ವಾರ ರಾತ್ರಿ ಪಕ್ಷದ ಕೇಂದ್ರ ಚುನಾ­ವಣಾ ಸಮಿತಿ ಸಭೆ ನಡೆಸಲಾಯಿತು. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಗೃಹ ಸಚಿವ ರಾಜನಾಥ್‌ ಸಿಂಗ್‌ ಕೂಡ ಸಭೆಯಲ್ಲಿ ಇದ್ದರು. ಮಹಾರಾಷ್ಟ್ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್‌್ ೨೭ ಕೊನೆಯ ದಿನವಾಗಿರುವುದರಿಂದ ಸ್ಥಾನ ಹೊಂದಾಣಿಕೆ ಕುರಿತು ಬೇಗ ನಿರ್ಧಾ­ರಕ್ಕೆ ಬರು­ವುದು ಎರಡೂ ಪಕ್ಷಗಳಿಗೂ ಅನಿವಾರ್ಯ­ವಾಗಿದೆ.

ಭಾನುವಾರದ ಬೆಳವಣಿಗೆ: ಸ್ಥಾನ ಹೊಂದಾಣಿಕೆ ಕುರಿತು ವಾರವಿಡೀ ನಡೆದ ರಾಜಕೀಯ ಕಸರತ್ತಿಗೆ ತೆರೆ ಎಳೆಯುವಂತೆ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಭಾನು­ವಾರ ಬಿಜೆಪಿಗೆ ೧೧೯ ಸ್ಥಾನಗಳಿಂತ ಹೆಚ್ಚಿನ­ದನ್ನು ಕೊಡಲಾಗದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಚೌಕಾಸಿ ಮಾಡುತ್ತಿರುವ ಠಾಕ್ರೆ ಅವರು ಮೋದಿ ಅವರ ಮನವೊ­ಲಿಕೆಗೂ ಮುಂದಾಗಿದ್ದಾರೆ.

ಮುಂಬೈನಲ್ಲಿ ಭಾನುವಾರ ಪಕ್ಷದ ರಾಜ್ಯ ಕಾರ್ಯ­ಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್‌, ‘ಗುಜರಾತ್‌ನಲ್ಲಿ ೨೦೦೨ರಲ್ಲಿ ನಡೆದ ಗಲಭೆ ಬಳಿಕ ಅಂದಿನ ಮುಖ್ಯಮಂತ್ರಿ ಮೋದಿ ಅವರ ಪದ­ಚ್ಯುತಿಗೆ ಎಲ್ಲರೂ ಒತ್ತಡ ಹಾಕಿದ್ದರು. ಆಗ ಶಿವ­ಸೇನಾ ವರಿಷ್ಠ ಬಾಳಾ ಠಾಕ್ರೆ ಮಾತ್ರ ಮೋದಿ ಬೆಂಬಲಕ್ಕೆ ನಿಂತಿದ್ದರು’ ಎನ್ನುವುದನ್ನು ನೆನಪಿಸಿದರು.

ಠಾಕ್ರೆ ಹೇಳಿದ್ದು: ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ೨೭೨ ಗುರಿ ತಲುಪಲು ಶಿವಸೇನಾ ಅಡ್ಡ­ಗಾಲು ಹಾಕಿಲ್ಲ. ಹಾಗೆಯೇ ಮಹಾರಾಷ್ಟ್ರ ಚುನಾವಣೆ­ಯಲ್ಲಿ ಶಿವಸೇನಾದ ೧೫೦ರ ಗುರಿ ಸಾಧಿಸಲು ಬಿಜೆಪಿ ನೆರವಾಗಬೇಕು. ‘ನಾವು ಮೊದಲು ೧೬೦ ಸ್ಥಾನಗ­ಳನ್ನು ಕೇಳಿದ್ದೆವು. ಈಗ ೯ ಸ್ಥಾನ­ಗಳನ್ನು ಬಿಟ್ಟುಕೊಡಲು ಸಿದ್ಧ. ನಾವು ೧೫೧ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಬಿಜೆಪಿ ೧೧೯
ಸ್ಥಾನ­ಗಳಲ್ಲಿ ಸ್ಪರ್ಧಿಸಲಿದೆ. ಉಳಿದ ೧೮ ಸ್ಥಾನ­ಗ­ಳನ್ನು ನಮ್ಮ ಮಿತ್ರಪಕ್ಷಗಳಿಗೆ ಕೊಡುತ್ತೇವೆ’ ಎಂದು ಠಾಕ್ರೆ ಹೇಳಿದರು.

ಜಂಟಿ ಹೊಣೆ: ಠಾಕ್ರೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿ­ಸಿದ ಬಿಜೆಪಿ, ‘ಮೈತ್ರಿ ಮುಂದುವರಿಸಿಕೊಂಡು ಹೋಗು­ವುದು ಎರಡೂ ಪಕ್ಷಗಳ ಕರ್ತವ್ಯ. ಮಾಧ್ಯಮಗಳ ಮುಖಾಂ­­ತರ ಹೇಳಿಕೆ ಕೊಡುವುದರ ಬದಲು ಭಿನ್ನಾ­ಭಿಪ್ರಾಯ ಬಗೆಹರಿಸಿಕೊಳ್ಳ­ಬೇಕು’ ಎಂದಿದೆ.

‘ಶಿವಸೇನಾ ೩೫ ಹಾಗೂ ನಾವು ೧೯ ಸ್ಥಾನಗಳನ್ನು 25 ವರ್ಷಗಳಿಂದ ಕಳೆದುಕೊಳ್ಳುತ್ತ ಬಂದಿದ್ದೇವೆ. ತಾನು ಗೆಲ್ಲದ ಸ್ಥಾನಗಳ ಹಂಚಿಕೆಗೆ ಸಂಬಂಧಿಸಿ ಸೇನಾ ಮರು ಚಿಂತನೆ ನಡೆಸಬೇಕು. ಇಲ್ಲದಿದ್ದರೆ ಆ ಎಲ್ಲ ಸ್ಥಾನ­ಗಳನ್ನು ಎನ್‌ಸಿಪಿ– ಕಾಂಗ್ರೆಸ್‌ ಮೈತ್ರಿ­ಕೂಟಕ್ಕೆ ಉಡುಗೊರೆಯಾಗಿ ಕೊಟ್ಟಂತೆ ಆಗುತ್ತದೆ’ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕರಾದ ಏಕ­ನಾಥ್‌ ಖಾಡ್ಸೆ ಹಾಗೂ ವಿನೋದ್‌ ತಾವ್ಡೆ ಹೇಳಿದ್ದಾರೆ.

ಈ ಮೈತ್ರಿಕೂಟ ಉಳಿಯ­ಬೇಕು. ಮುಖ್ಯ­ಮಂತ್ರಿ ಸ್ಥಾನ ಪಡೆ­ಯಲು ನಾನು ಈ ಮಾತು ಹೇಳು­ತ್ತಿಲ್ಲ. ಹಿಂದುತ್ವ­ಕ್ಕಾಗಿ ಈ ಮೈತ್ರಿ­ಕೂಟ ಉಳಿಯಬೇಕು. ಮುಂದೆ ಆಗುವುದು ನನ್ನ ಹಣೆ­ಬರಹ. ನಾವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಯಾರಿದ್ದೇವೆ.
–ಉದ್ಧವ್‌ ಠಾಕ್ರೆ

Write A Comment