ಪವಿತ್ರ ರಂಜಾನ್ ಮಾಸಾಚರಣೆಯ ಶುಭ ಸಂದರ್ಭದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ವಿಶ್ವಮಟ್ಟದ 500 ವಾಣಿಜೋದ್ಯಮಿಗಳನ್ನು ಆತ್ಮೀಯವಾಗಿ ಅಹ್ವಾನಿಸಿ, ಯು.ಎ.ಇ. ಉಪಾಧ್ಯಕ್ಷರು, ಪ್ರಧಾನಮಂತ್ರಿಗಳು, ದುಬಾಯಿ ಆಡಳಿತ ದೊರೆ ಗೌ| ಶೇಖ್ ಮಹ್ಮದ್ ಬಿನ್ ರಾಶೀದ್ ಅಲ್ ಮಕ್ತೂಮ್ ವಿಶೇಷ ಸಭೆ ಮತ್ತು ಇಪ್ತಾರ್ ಕೂಟವನ್ನು ಆಯೋಜಿಸಿದ್ದರು.
2015 ಜುಲೈ 12 ನೇ ತಾರೀಕು ಭಾನುವಾರ ಸಂಜೆ 7.30 ಕ್ಕೆ ದುಬಾಯಿ ಅಲ್ ಸುಫಾಹ ಬಳಿ ಇರುವ ಬೀಚ್ ಪ್ಯಾಲೆಸ್ ನಲ್ಲಿ ಗೌ| ಶೇಖ್ ಮಹ್ಮದ್ ಬಿನ್ ರಾಶೀದ್ ಅಲ್ ಮಕ್ತೂಮ್ ಸರ್ವರನ್ನು ಶುಭವನ್ನು ಕೋರಿ ಬರಮಾಡಿಕೊಂಡರು. ಜೊತೆಯಲ್ಲಿ ದುಬಾಯಿ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮಹ್ಮದ್ ಬಿನ್ ರಾಶೀದ್, ದುಬಾಯಿ ಉಪ ಆಡಳಿತ ದೊರೆ ಶೇಖ್ ಮಕ್ತೂಮ್ ಹಾಗೂ ವಿಮಾನ ಯಾನ ಮತ್ತು ಇನ್ನಿತರ ಪ್ರಮುಖ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು, ಚಿಲ್ಲಿ ವಿಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಸತೀಶ್ ವೆಂಕಟರಮಣ ಗೌರವ ಆಮಂತ್ರಿತರಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಇಪ್ತಾರ್ ಕೂಟದ ನಂತರ ಭಾಗಿಗಳಾದ ಸರ್ವ ಅತಿಥಿಗಳಿಗೆ ಶುಭಾಶಯಗಳನ್ನು ಕೋರಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಎಲ್ಲಾ ಉದ್ಯಮಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ವಿವಿಧ ದೇಶಿಯರ ಜೊತೆಯಲ್ಲಿ ಭಾರತೀಯರು, ಕನ್ನಡಿಗ ಉದ್ಯಮಿಗೆ ಸಂದ ಗೌರವ ಅವಿಸ್ಮರಣೀಯವಾಗಿತ್ತು.