ಬಹರೈನ್ ; ಇಲ್ಲಿನ ಅನಿವಾಸಿ ಬಿಲ್ಲವರ ಒಕ್ಕೂಟವಾದ “ಬಹರೈನ್ ಬಿಲ್ಲವಾಸ್” ನವರು ಒಂದೇ ಜಾತಿ ಒಂದೇ ಮತ ಒಂದೇ ಧರ್ಮ ಎಂದು ಋಗ್ವೇದದ ಸಾರವನ್ನು ಜಗತ್ತಿಗೆ ಸಾರಿದ ಬ್ರಹ್ಮ್ಮಾಶ್ರೀ ನಾರಾಯಣ ಗುರುಗಳ 160 ನೇ ಜಯಂತಿಯ ಅಂಗವಾಗಿ ಇಲ್ಲಿನ ಕನ್ನಡ ಸಂಘದ ಸಭಾಂಗಣದಲ್ಲಿ ಗುರುಪೂಜೆಯನ್ನು ಆಯೋಜಿಸಿತ್ತು .
ಸದಸ್ಯರೂ ಹಾಗು ಇತರರೂ ಸೇರಿದಂತೆ ನೂರಾರು ಜನರು ಈ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಗುರುಗಳ ಕ್ರಪೆಗೆ ಪಾತ್ರರಾದರು . ಬೆಳಗ್ಗೆ ೧೦:೦೦ ಘಂಟೆಗೆ ಪ್ರಾರಂಭವಾದ ಪೂಜಾ ವಿಧಿ ವಿಧಾನಗಳು ಮಧ್ಯಾಹ್ನ 1 ಘಂಟೆಯವರೆಗೂ ಮುಂದುವರೆಯಿತು . ತದನಂತರ ಮಂಗಳಾರತಿಯೊಂದಿಗೆ ಮಹಾ ಪೂಜೆಯು ಸಂಪನ್ನಗೊಂಡಿತು . ಇಲ್ಲಿನ ಆರಾದ್ ಅಯ್ಯಪ್ಪ ದೇವಸ್ಥಾನದ ಭಜನಾ ಮಂಡಳಿಯು ತಮ್ಮ ಸುಶ್ರಾವ್ಯ ಕಂಠದಿಂದ ಭಜನೆಗಳನ್ನು ಹಾಡಿ ನೆರೆದ ಭಕ್ತಾಧಿಗಳು ಭಾವ ಪರವಶರಾಗುವಂತೆ ಮಾಡಿತು . ಮಹಾಪೂಜೆಯ ನಂತರ ನೆರೆದ ಭಕ್ತಾದಿಗಳಿಗೆ ತೀರ್ಥ ಹಾಗು ಪ್ರಸಾದವನ್ನು ವಿತರಿಸಲಾಯಿತು . ಮಹಾಪ್ರಸಾದದ ಅಂಗವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು .
ಉಚಿತ ವೈದ್ಯಕೀಯ ಶಿಬಿರ
ಗುರು ಜಯಂತಿಯ ಅಂಗವಾಗಿ ಪ್ರಸಿದ್ಧ ಅಲ್ ಹಿಲಾಲ್ ಆಸ್ಪ್ರತೆಯ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರವೊಂದನ್ನು ಪ್ರಥಮ ಬಾರಿಗೆ ತನ್ನ ಸದಸ್ಯರಿಗಾಗಿ “ಬಹರಿನ್ ಬಿಲ್ಲವಾಸ್ ” ಏರ್ಪಡಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು . ಇತ್ತೇಚೆಗಿನ ದಿನಗಳಲ್ಲಿ ಒತ್ತಡದ ಜೀವನ , ಆಧುನಿಕ ಆಹಾರ ಶೈಲಿಯಿಂದಾಗಿ ಮಧುಮೇಹ ,ರಕ್ತದ ಒತ್ತಡ ,ಕೊಬ್ಬು ಮುಂತಾದವುಗಳು ಯಾವ ಮುನ್ಸೂಚನೆಯನ್ನೂ ನೀಡದೆ ನಿಶಬ್ದವಾಗಿ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ .ಈ ಖಾಯಿಲೆಗಳು ನಿಯಮಿತವಾದ ವೈದ್ಯಕೀಯ ತಪಾಸಣೆಯಿಂದ ಮಾತ್ರ ಅರಿಯುವುದಲ್ಲದೆ ಪ್ರಾಣಕ್ಕೆ ಅಪಾಯ ಬರುವವರೆಗೂ ಯಾವುದೇ ಸುಳಿವು ನೀಡುವುದಿಲ್ಲ . ಇಂತಹ ವೈದ್ಯಕೀಯ ತಪಾಸಣೆಯ ಅಗತ್ಯತೆಯನ್ನು ಮನಗಂಡ ಇಲ್ಲಿನ “ಬಹರೈನ್ ಬಿಲ್ಲವಾಸ್ ” ತನ್ನ ಸದಸ್ಯರಿಗಾಗಿ ಪ್ರಪ್ರಥಮ ಬಾರಿಗೆ ಈ ವೈದ್ಯಕೀಯ ಶಿಬಿರವನ್ನು ಏರ್ಪಡಿಸಿದ್ದು ಸುಮಾರೋ 60 ಕ್ಕಿಂತಲೂ ಹೆಚ್ಚಿನ ಸದಸ್ಯರುಗಳು ಈ ಶಿಬಿರದ ಸದುಪಯೋಗ ಪಡಕೊಂಡರು . ರಕ್ತದ ಒತ್ತಡ,ಮಧುಮೇಹ , ಕೊಬ್ಬು ಮಾತ್ರವಲ್ಲದೆ ಮೂತ್ರಕೋಶ ,ಯಕ್ರತ್ ಮುಂತಾದವುಗಳ ತಪಾಸಣೆಯನ್ನು ಕೂಡ ಈ ಶಿಬಿರದಲ್ಲಿ ಉಚಿತವಾಗಿ ಮಾಡಲಾಯಿತು . ಅಲ್ ಹಿಲಾಲ್ ಆಸ್ಪತ್ರೆಯ ನೂತನವಾದ ರಿಫ್ಫಾ ಶಾಖೆಯಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು ಬಹರೈನ್ ಬಿಲ್ಲವಾಸ್ ನ ನ ಅಧ್ಯಕ್ಷರಾದ ಕೃಷ್ಣ ಸುವರ್ಣ ,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲೋಲಾಕ್ಷಿ ಹಾಗು ಆಡಳಿತ ಮಂಡಳಿಯ ಪಧಾದಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು . ಅಲ್ ಹಿಲಾಲ್ ಆಸ್ಪತ್ರೆಯ ಸಾಮಾಜಿಕ ಕಳಕಳಿಯನ್ನು ಅಪಾರವಾಗಿ ಶ್ಲಾಘಿಸಿದ ಶ್ರೀಮತಿ ಲೋಲಾಕ್ಷಿ ರಾಜಾರಾಂ ರವರು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಿಕ ಡಾ ಸಾಯಿ ಗಿರಿಧರ್ ,ಪ್ರಭಂದಕ ಆಸೀರ್ ಹಾಗು ಸಿಬ್ಬಂದಿ ವರ್ಗಕ್ಕೆ ಕ್ರತಜ್ನತೆಗಳನ್ನು ಅರ್ಪಿಸಿದರು .
ಚಿತ್ರ-ವರದಿ-ಕಮಲಾಕ್ಷ ಅಮೀನ್